ನವದೆಹಲಿ : ಆರ್.ಎಸ್.ಎಸ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದಾಕ್ಷಣ ಅದರ ಸಿದ್ಧಾಂತಗಳನ್ನು ಒಪ್ಪಿಕೊಂಡಂತಲ್ಲ ಎಂದು ಸಮಾಜಸೇವಕ, ವಿಪ್ರೋ ಸಮೂಹದ ಅಧ್ಯಕ್ಷ ಅಜೀಂ ಪ್ರೇಮ್ ಜಿ ಹೇಳಿದ್ದಾರೆ.
ಅಲ್ಲದೇ ಆರ್.ಎಸ್.ಎಸ್ ನ ಅಂಗಸಂಸ್ಥೆ ರಾಷ್ಟ್ರೀಯ ಸೇವಾ ಭಾರತಿ' ಇಲ್ಲಿ ಅಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ 800ಕ್ಕೂ ಹೆಚ್ಚು ಸಂಘಟನೆಗಳ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅಜೀಂ ಪ್ರೇಮ್ ಜೀ, ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಆಹ್ವಾನವನ್ನು ಒಪ್ಪಿ ಇಲ್ಲಿಗೆ ಆಗಮಿಸಿದ್ದೇನೆ. ಇಲ್ಲಿಗೆ ಆಹ್ವಾನ ಬಂದ ವೇಳೆ, ಅಲ್ಲಿಗೆ ತೆರಳುವುದು ಸರಿಯಲ್ಲ. ಆರ್.ಎಸ್.ಎಸ್ ನ ಕಾರ್ಯಕ್ರಮಕ್ಕೆ ತೆರಳಿದರೆ, ಅದರ ಸಿದ್ಧಾಂತಗಳನ್ನು ಒಪ್ಪಿದಂತೆ ಎಂದು ಹಲವರು ನನಗೆ ಎಚ್ಚರಿಕೆ ರೂಪದ ಸಲಹೆ ನೀಡಿದರು. ಆದರೆ ನಾನು ರಾಜಕೀಯ ನಾಯಕನಲ್ಲ. ಹೀಗಾಗಿ ಇಂಥ ಸಲಹೆಗಳನ್ನು ಸ್ವೀಕರಿಸಲಿಲ್ಲ. ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಾಕ್ಷಣ ಆ ಸಂಘಟನೆಯ ಸಿದ್ಧಾಂತಗಳನ್ನು ಒಪ್ಪಿಕೊಂಡಂತೆ ಆಗುವುದಿಲ್ಲ ಎಂದು ಪ್ರೇಮ್ ಜೀ ಹೇಳಿದರು.
ಇದೇ ವೇಳೆ ಹಲವು ಸಂಘ ಸಂಸ್ಥೆಗಳ ಸಾಮಾಜಿಕ ಕಾರ್ಯವನ್ನು ಪ್ರಶಂಸಿಸಿದ ಪ್ರೇಮ್ ಜೀ, ಗುಣಮಟ್ಟದ ಶಿಕ್ಷಣ ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಪ್ರೇಮ್ ಜಿ ಜತೆ ವೇದಿಕೆ ಹಂಚಿಕೊಂಡ ಮೋಹನ್ ಭಾಗವತ್ ಮಾತನಾಡಿ, ಯಾವುದೇ ಸ್ವಾರ್ಥ ಭಾವನೆ ಇಲ್ಲದೇ, ತಾರತಮ್ಯ ನೀತಿ ಅನುಸರಿಸದೇ ಆರ್.ಎಸ್.ಎಸ್ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಮಾಡಲು ಬಯಸುತ್ತದೆ ಎಂದರು.