ಭೋಪಾಲ್ : 'ಬಾಬಾ ರಾಮ್ ದೇವ್' ಅವರ ದಿವ್ಯ ಫಾರ್ಮಸಿಯ ಪುತ್ರ ಜೀವಕ್ ಬೀಜ್ ಔಷಧದ ಬಗ್ಗೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಪುತ್ರಜೀವಕ್ ಬೀಜ್ ಔಷಧಕ್ಕೆ ನಿಷೇಧ ವಿಧಿಸಿದೆ.
ದಿವ್ಯ ಫಾರ್ಮಸಿ ಔಷಧಿಯ ಹೆಸರು ಬದಲಾವಣೆ ಮಾಡುವವರೆಗೆ ಪುತ್ರಜೀವಕ್ ಬೀಜ್ ಮೇಲಿನ ನಿಷೇಧ ತೆರವುಗೊಳಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಈ ಬಗ್ಗೆ ಪತಂಜಲಿ ಯೋಗಪೀಠಕ್ಕೆ ಮಾಹಿತಿ ನೀಡಿರುವ ಮಧ್ಯಪ್ರದೇಶ ಸರ್ಕಾರ, ಮೊದಲು ಔಷಧದ ಹೆಸರನ್ನು ಬದಲಾವಣೆ ಮಾಡುವಂತೆ ಸೂಚಿಸಿದೆ. ಹೆಸರು ಬದಲಾವಣೆ ಮಾಡಿದ ನಂತರವಷ್ಟೇ ನಿಷೇಧ ತೆರವುಗೊಳಿಸಲಾಗುತ್ತದೆ ಎಂದು ಹೇಳಿದೆ.
ಬಾಬಾ ರಾಮ್ ದೇವ್ ಅವರ ದಿವ್ಯ ಫಾರ್ಮಸಿಯಿಂದ ತಯಾರಾದ ಔಷಧಿ ಗಂಡು ಸಂತಾನದ ಖಾತ್ರಿ ನೀಡುತ್ತದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಔಷಧಿಯ ಹೆಸರನ್ನು ಬದಲಾವಣೆ ಮಾಡಬೇಕೆಂದು ಸೂಚನೆ ನೀಡಿದೆ.
ಪುತ್ರ ಜೀವಕ್ ಬೀಜ್ ಬಗ್ಗೆ ರಾಜ್ಯಸಭೆಯಲ್ಲಿ ಜೆಡಿಯು ಸಂಸದ ಕೆ.ಸಿ ತ್ಯಾಗಿ ಗದ್ದಲವೆಬ್ಬಿಸಿದ್ದರು. ಆದರೆ ತಮ್ಮ ವಿರುದ್ಧ ಕೇಳಿಬಂದಿದ್ದ ಆರೋಪವನ್ನು ತಳ್ಳಿಹಾಕಿರುವ ಬಾಬಾ ರಾಮ್ ದೇವ್ ಇದು ಬಂಜೆತನವನ್ನು ನಿವಾರಿಸುವ ಔಷಧವೇ ಹೊರತು ಗಂಡು ಸಂತಾನದ ಖಾತ್ರಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.