ನವದೆಹಲಿ : ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸಂಕಷ್ಟ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಆಪ್ ಹಿರಿಯ ಮುಖಂಡ ಕುಮಾರ್ ವಿಶ್ವಾಸ್ ತನ್ನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಆಪ್ ಸ್ವಯಂಸೇವಕಿ ದೆಹಲಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ಕುಮಾರ್ ವಿಶ್ವಾಸ್ ಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಆದರೆ ತನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ವಿಶ್ವಾಸ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಬಾರ್ಖಾ ಶುಕ್ಲಾ ಸಿಂಗ್, ಕುಮಾರ್ ವಿಶ್ವಾಸ್ ವಿರುದ್ಧ ಆಪ್ ಸ್ವಯಂಸೇವಕಿ ಪೊಲೀಸ್ ಕಮಿಷನರ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೂ ಲಿಖಿತ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ತನ್ನ ಮತ್ತು ವಿಶ್ವಾಸ್ ನಡುವೆ ಅಕ್ರಮ ಸಂಬಂಧ ಇದೆ ಎಂಬ ಊಹಾಪೋಹವನ್ನು ವಿಶ್ವಾಸ ಈವರೆಗೂ ಅಲ್ಲಗಳೆದಿಲ್ಲ. ಅಲ್ಲದೇ ನಾನು ವಿಶ್ವಾಸ್ ವಿರುದ್ಧ ಕೇಜ್ರಿವಾಲ್ ಅವರಿಗೂ ದೂರು ನೀಡಿದಾಗ ಆ ಬಗ್ಗೆ ಸಮರ್ಪಕವಾಗಿ ಕ್ರಮಕೈಗೊಂಡಿಲ್ಲ ಎಂದು ಆಪ್ ಸ್ವಯಂಸೇವಕಿ ದೂರಿದ್ದಾರೆ. ಈ ಅಕ್ರಮ ಸಂಬಂಧದ ಸುದ್ದಿಯಿಂದಾಗಿ ತನ್ನ ಪತಿ ನನ್ನ ಬಿಟ್ಟು ಹೋಗಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.