ನವದೆಹಲಿ : ಭೂಗತಪಾತಕಿ ದಾವೂದ್ ಇಬ್ರಾಹಿಂ 1994ರಲ್ಲಿ ಶರಣಾಗಲು ಉತ್ಸುಕತೆ ತೋರಿದ್ದ ಎಂಬ ತಮ್ಮ ಹೇಳಿಕೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾದ ಬೆನ್ನಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ನೀರಜ್ ಕುಮಾರ್ ಉಲ್ಟಾ ಹೊಡೆದಿದ್ದಾರೆ.
ನಾನು ದಾವೂದ್ ಜತೆ ದೂರವಾಣಿಯಲ್ಲಿ ಮಾತನಾಡಿದ್ದು ನಿಜ. ಆದರೆ, ಯಾವುದೇ ಹಂತದಲ್ಲೂ ದಾವೂದ್ ಇಬ್ರಾಹಿಂ ಶರಣಾಗತಿಗೆ ಆಸಕ್ತಿ ತೋರಿರಲಿಲ್ಲ. ಆತ ಶರಣಾಗುವುದಕ್ಕೆ ಯಾರೊಬ್ಬರ ಅಡ್ಡಿಯೂ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೆ, ನನ್ನನ್ನು ಭೇಟಿ ಮಾಡಿದ ಪತ್ರಿಕಾ ವರದಿಗಾರ ನನಗೆ ಪರಿಚಯದವರಾಗಿದ್ದು, ಅವರೊಡನೆ ನಾನು ಅನೌಪಚಾರಿಕವಾಗಿ ಹರಟೆ ಹೊಡೆಯುತ್ತ ಹಲ ವಿಷಯ ಹೇಳಿದ್ದೆ. ಅವರಿಗೆ ನಾನು ಸಂದರ್ಶನ ನೀಡಿಲ್ಲ. ಈ ಹರಟೆಯನ್ನೇ ಅವರು ಸಂದರ್ಶನದ ರೂಪ ನೀಡಿ ಪ್ರಕಟಿಸಿದ್ದಾರೆ. ಅದರಲ್ಲಿನ ಅಂಶಗಳನ್ನು ತಿರುಚಿದ್ದಾರೆ ಎಂದು ನೀರಜ್ ಕುಮಾರ್ ಹೇಳಿದ್ದಾರೆ.