ನವದೆಹಲಿ : ಭೂಗತ ಪಾತಕಿ,1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ 1994ರಲ್ಲಿ ಶರಣಾಗಲು ಬಯಸಿದ್ದ. ನಾನು ಅವನಲ್ಲಿ ಮೂರು ಬಾರಿ ಮಾತುಕತೆ ನಡೆಸಿದ್ದೆ ಎಂದು ಸಿಬಿಐ ನಿವೃತ್ತ ಡಿಐಜಿ ನೀರಜ್ ಕುಮಾರ್ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
1994ರ ಜೂನ್ ತಿಂಗಳಿನಲ್ಲಿ ನಾನು ದಾವೂದ್ ಜೊತೆ ಮೂರು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದೆ. ಆಗ ದಾವೂದ್ ಶರಣಾಗತನಾಗುವ ಇಂಗಿತ ವ್ಯಕ್ತಪಡಿಸಿದ್ದ. ಆದರೆ ಸಮಸ್ಯೆ ಏನೆಂದರೆ ಶರಣಾಗಿ ಭಾರತಕ್ಕೆ ಮರಳಿದರೆ ತನ್ನ ವಿರೋಧಿ ಗ್ಯಾಂಗ್ ನವರು ನನ್ನ ಹತ್ಯೆಗೈಯುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದ. ಅದಕ್ಕೆ ನಾನು ನಿನ್ನ ರಕ್ಷಣೆ ಸಿಬಿಐ ಹೊಣೆಗಾರಿಕೆ ಎಂದಿದ್ದೆ ಎಂದು ತಾವು ಬರೆಯುತ್ತಿರುವ ಪುಸ್ತಕದಲ್ಲಿನ ಅಂಶದ ಕುರಿತು ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡುತ್ತ ವಿವರಿಸಿದ್ದಾರೆ.
ಹೀಗೆ ನೀರಜ್ ಕುಮಾರ್ ಪಾತಕಿ ದಾವೂದ್ ಜೊತೆ ಮಾತುಕತೆ ಮುಂದುವರಿಸಿದ್ದರು. ಆಗ ಸಿಬಿಐನ ಹಿರಿಯ ಅಧಿಕಾರಿಗಳು ದೂರವಾಣಿ ಮಾತುಕತೆ ಮೊದಲು ನಿಲ್ಲಿಸಿ ಎಂದು ಕುಮಾರ್ ಗೆ ತಾಕೀತು ಮಾಡಿದ್ದರಂತೆ. ಅಲ್ಲಿಗೆ ದಾವೂದ್ ಶರಣಾಗತಿ ವಿಷಯ ಮೂಲೆಗೆ ಸೇರಿತ್ತು.
ಆದರೆ ಈ ಸಂದರ್ಭದಲ್ಲಿದ್ದ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದ ಸರ್ಕಾರ ಏನು ಹೇಳಿತ್ತು, ಯಾವುದಾದರೂ ಆದೇಶ ನೀಡಿತ್ತೇ ಎಂಬ ಬಗ್ಗೆ ಕುಮಾರ್ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ ಎಂದು ವರದಿ ಹೇಳಿದೆ.
ನೀರಜ್ ಕುಮಾರ್ 2013ರ ಜುಲೈನಲ್ಲಿ ದೆಹಲಿ ಕಮಿಷನರ್ ಆಗಿ ನಿವೃತ್ತಿಯಾಗಿದ್ದರು. 1993 ಮಾರ್ಚ್ 12ರಂದು ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ ಸರಣಿ ಬಾಂಬ್ ಸ್ಫೋಟದ ತನಿಖೆಯನ್ನು ಸಿಬಿಐ ಡಿಐಜಿಯಾಗಿ ನೀರಜ್ ಕುಮಾರ್ ನಿರ್ವಹಿಸಿದ್ದರು.
ಸ್ಫೋಟ ಘಟನೆ ನಂತರ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕೂಡಾ ಹೇಳಿಕೆ ನೀಡಿ, ಭಾರತದ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ತನಗೆ ದೂರವಾಣಿ ಕರೆ ಮಾಡಿ, ನಾನು ಈ ಎಲ್ಲಾ ಪಾತಕ ಕೆಲಸ ಬಿಟ್ಟು ಶರಣಾಗುತ್ತೇನೆ. ಆದರೆ ಮುಂಬೈ ಪೊಲೀಸರು ಯಾವುದೇ ಚಿತ್ರಹಿಂಸೆ ನೀಡಬಾರದು. ಅಲ್ಲದೇ ಅವರು ನನ್ನ ಗೃಹ ಬಂಧನದಲ್ಲಿ ಇರಿಸಬೇಕೆಂಬ ಷರತ್ತು ವಿಧಿಸಿದ್ದ ಎಂದು ಹೇಳಿದ್ದರು. ಆದರೆ ಸರ್ಕಾರ ದಾವೂದ್ ನ ಷರತ್ತು ಬದ್ಧ ಶರಣಾಗತಿಯನ್ನು ತಿರಸ್ಕರಿಸಿತ್ತು.