ನವದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಶೀಘ್ರದಲ್ಲಿಯೇ ಬಂಧಿಸಿ, ಭಾರತಕ್ಕೆ ತರಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಖಾಸಗಿ ವಾಹಿನಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ದಾವೂದ್ ಶೀಘ್ರದಲ್ಲಿಯೇ ಬಂಧನಕ್ಕೊಳಗಾಗಲಿದ್ದಾನೆ. ಯಾವುದೇ ಸಂದರ್ಭದಲ್ಲಿ ಆತನನ್ನು ಭಾರತಕ್ಕೆ ತರಲಾಗುವುದು. ಅವನೊಬ್ಬ ಅಂತಾರಾಷ್ಟ್ರೀಯ ಉಗ್ರವಾದಿ. ಆತನನ್ನು ಬಂಧಿಸಲು ಕೆಲವು ಅಂತಾರಾಷ್ಟ್ರೀಯ ಏಜೆನ್ಸಿಗಳ ಸಹಕಾರ ಬೇಕಿದೆ’ ಎಂದಿದ್ದಾರೆ.
ಆದರೆ ಅವಧಿಯಲ್ಲಿ ಈ ಕಾರ್ಯಾಚರಣೆ ನಡೆಯಲಿದೆ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟತೆ ನೀಡಲಿಲ್ಲ.
ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ ಎನ್ನುವ ವಿಚಾರವಾಗಿ ವಾಹಿನಿಯೊಂದು ನಡೆಸಿದ ಕಾರ್ಯಾಚರಣೆಯ ಬಳಿಕ ಪಾಕಿಸ್ತಾನಕ್ಕೂ ಆತನನ್ನು ಬಂಧಿಸಿ ಭಾರತಕ್ಕೆ ಒಪ್ಪಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿರುವ ರಾಜನಾಥ್ ಸಿಂಗ್, ದಾವೂದ್ಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳ ಅಗತ್ಯತೆ ಇದೆ. ಪಾಕಿಸ್ತಾನದಿಂದಲೂ ಇನ್ನಷ್ಟು ಮಾಹಿತಿ ಕೇಳಲಾಗಿದೆ ಎಂದಿದ್ದಾರೆ.
ಐಸಿಸ್ ಬಿಡುಗಡೆ ಮಾಡಿರುವ ವಿಡಿಯೋ ಬೆದರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್, ಐಸಿಸ್ನಿಂದ ಭಾರತವನ್ನು ಏನು ಮಾಡಲಿಕ್ಕೂ ಸಾಧ್ಯವಿಲ್ಲ. ಅಗತ್ಯವಿದ್ದಾಗ ಸೂಕ್ತ ಭದ್ರತೆಯನ್ನು ಒದಗಿಸಲಾಗುತ್ತದೆ. ಸರ್ಕಾರ ಅಗತ್ಯ ಸಂದರ್ಭದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.