ಬೆಂಗಳೂರು : ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ಸಿಇಟಿ ಪರೀಕ್ಷೆಯ ನಂತರವಷ್ಟೇ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಿತ್ತು. ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆಗೆ ಏ.29 ಹಾಗೂ 30ರ ವೇಳಾಪಟ್ಟಿ ನಿಗದಿಪಡಿಸಿದ್ದು ಕಾರಣವಾಗಿತ್ತು. ಈ ನಡುವೆ ಸಾರಿಗೆ ಕಾರ್ಮಿಕ ಸಂಘಟನೆಗಳು ಏ.30ರಂದು ಬಂದ್ ಆಯೋಜಿಸಿದ್ದರಿಂದ ಪ್ರಾಧಿಕಾರವು ಅನಿವಾರ್ಯವಾಗಿ ಸಿಇಟಿ ಪರೀಕ್ಷೆಯನ್ನು ಮೇ 12 ಹಾಗೂ 13ಕ್ಕೆ ಮುಂದೂಡಿದೆ.
ಇದರಿಂದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ತನ್ನ ಸಿದ್ಧತೆಗನುಗುಣವಾಗಿ ಮೇ ಮೊದಲ ವಾರದಲ್ಲೇ ಫಲಿತಾಂಶ ಘೋಷಿಸಬೇಕೋ ಅಥವಾ ಸಿಇಟಿ ಪರೀಕ್ಷೆ ಮುಗಿಯುವವರೆಗೂ ಕಾಯಬೇಕೋ ಎಂಬ ಗೊಂದಲಕ್ಕೆ ಸಿಲುಕಿದೆ. ಪರೀಕ್ಷಾ ಫಲಿತಾಂಶ ಪ್ರಕಟಿಸಲು ಸರ್ವ ವಿಧದಲ್ಲೂ ಇಲಾಖೆ ಸಜ್ಜಾಗಿದ್ದರೂ ವಿದ್ಯಾರ್ಥಿಗಳ ಹಿತ ಪರಿಗಣಿಸಿ ಸಿಇಟಿ ಪರೀಕ್ಷೆ ಮುಗಿದ ನಂತರವೇ ಪ್ರಕಟಿಸುವುದು ಸೂಕ್ತ ಎಂಬ ಚಿಂತನೆ ನಡೆಸಿದೆ. ಇಲಾಖೆಯ ಮೂಲಗಳ ಪ್ರಕಾರ ಬಹುತೇಕ ಸಿಇಟಿ ಪರೀಕ್ಷೆಯ ನಂತರವೇ ಪಿಯು ಫಲಿತಾಂಶ ಪ್ರಕಟಮಾಡುವ ನಿರ್ಧಾರವನ್ನು ಇಲಾಖೆ ಕೈಗೊಳ್ಳುವ ಸಾಧ್ಯತೆಯಿದೆ.
ಸಿಇಟಿ ಪರೀಕ್ಷೆಗೂ ಮೊದಲೇ ಪಿಯು ಫಲಿತಾಂಶ ನೀಡಿದರೆ, ಕೊಂಚ ಕಡಿಮೆ ಅಂಕ ಗಳಿಸಿದ ಅಥವಾ ಒಂದೋ, ಎರಡೋ ವಿಷಯಗಳಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಸಿಇಟಿ ಬಗ್ಗೆ ಆಸಕ್ತಿ ಕಳೆದುಕೊಳ್ಳಬಹುದು ಅಥವಾ ಪರೀಕ್ಷೆಯನ್ನೇ ಬರೆಯದಿರಬಹುದು. ಸಿಇಟಿ ಪರೀಕ್ಷೆ ನಂತರ ಫಲಿತಾಂಶ ನೀಡಿದರೆ, ಪಿಯು ಫಲಿತಾಂಶದಲ್ಲಿ ಸ್ವಲ್ಪ ಕಡಿಮೆ ಫಲಿತಾಂಶ ಪಡೆದವರಿಗೆ ಸಿಇಟಿ ಫಲಿತಾಂಶ ಉತ್ತಮವಾಗಿದ್ದರೆ ಅಥವಾ ಒಂದೋ ಎರಡೋ ವಿಷಯ ಪಿಯುಸಿಯಲ್ಲಿ ಅನುತ್ತೀರ್ಣರಾದವರಿಗೆ ಜೂನ್ನಲ್ಲಿ ನಡೆಯುವ ಪೂರಕ ಪರೀಕ್ಷೆ (ಸಪ್ಲಿಮೆಂಟರಿ) ಸಿಇಟಿ ಸೀಟು ಪಡೆಯುವ ಆಕಾಂಕ್ಷೆಗೆ ಮರು ಜೀವ ನೀಡಬಹುದು.
ಸಿಇಟಿ ಸೀಟು ಹಂಚಿಕೆ ವೇಳೆ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವನ್ನೂ ಪರಿಗಣಿಸುವುದರಿಂದ ಅಲ್ಲಿಯೂ ಹಲವರು ಸೀಟು ಪಡೆಯಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಸಿಇಟಿಗೂ ಮೊದಲೇ ಫಲಿತಾಂಶ ನೀಡದಿರುವುದೇ ಒಳ್ಳೆಯದು ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.