ನವದೆಹಲಿ : 'ನರೇಂದ್ರ ಮೋದಿ' ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಅಲ್ಪಸಂಖ್ಯಾತರು ಭಾರತದಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ತುತ್ತಾಗುತ್ತಿದ್ದಾರೆ ಎಂಬ ಅಮೆರಿಕಾ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ವರದಿಗೆ ಭಾರತ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರು ಮಾತ್ರ ಈ ರೀತಿಯ ವರದಿ ನೀಡಲು ಸಾಧ್ಯ ಎಂದು ಹೇಳಿದೆ.
ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ, ಭಾರತದಲ್ಲಿ ಅಲ್ಪಸಂಖ್ಯಾತರು ಧಾರ್ಮಿಕ ಹಿಂಸಾಚಾರಕ್ಕೆ ತುತ್ತಾಗುತ್ತಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿದೆ. ಸಂಘ ಪರಿವಾರಗಳು ಘರ್ವಾಪಸಿ ಹೆಸರಲ್ಲಿ ಬಲವಂತ ಮತಾಂತರದಲ್ಲಿ ತೊಡಗಿದೆ ಎಂದು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ತನ್ನ ವರದಿಯಲ್ಲಿ ತಿಳಿಸಿತ್ತು. ವಿ.ಎಚ್.ಪಿ ಮತ್ತು ಆರ್.ಎಸ್.ಎಸ್ ಸಂಘಟನೆಗಳು ಪ್ರತಿ ಮುಸ್ಲಿಂಗೆ 5 ಲಕ್ಷ, ಪ್ರತಿ ಕ್ರೈಸ್ತರಿಗೆ 2 ಲಕ್ಷ ಹಣ ನೀಡಿ ಮತಾಂತರ ಮಾಡುತ್ತಿವೆ ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಆರೋಪ ಮಾಡಿತ್ತು.
ಇದೊಂದು ಪೂರ್ವಾಗ್ರಹ ಪೀಡಿತ ವರದಿ ಇದರ ಕುರಿತು ತಾನು ಹೆಚ್ಚಿನ ಗಮನ ಹರಿಸುವುದಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಇತ್ತೀಚೆಗಷ್ಟೇ ತಮ್ಮನ್ನು ಭೇಟಿ ಮಾಡಿದ ಕ್ರೈಸ್ತ ಪಾದ್ರಿಗಳು ಹಾಗೂ ಮುಸ್ಲಿಮ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಈ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಪ್ರಧಾನಿ ನರೇಂದ್ರ ಮೋದಿ ಧಾರ್ಮಿಕ ಸ್ವಾತಂತ್ರ್ಯದ ವಿರೋಧಿಯಲ್ಲ ಎಂಬ ವರದಿಗಳು ಪ್ರಕಟವಾಗಿದ್ದವು.