ಮುಂಬೈ : ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ವಿರುದ್ಧ ಏ.30ರಿಂದ ಕಿಸಾನ್ ಪಾದಯಾತ್ರೆ ಕೈಗೊಂಡಿದ್ದಾರೆ.
ದೇಶದಲ್ಲಿ ಅತ್ಯಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವಿದರ್ಭದಿಂದ ರಾಹುಲ್ ಗಾಂಧಿ ಪಾದಯಾತ್ರೆ ಪ್ರಾರಂಭವಾಗಿದೆ. ಸುಮಾರು 15 ಕಿ.ಮಿ ದೂರದ ಪಾದಯಾತ್ರೆಯನ್ನು ರಾಹುಲ್ ಗಾಂಧಿ ಕೈಗೊಂಡಿದ್ದಾರೆ.
ವಿದರ್ಭದ ಗುಂಜಿ ಗ್ರಾಮದಿಂದ ಪ್ರಾರಂಭಿಸಿರುವ ಪಾದಯಾತ್ರೆಯಲ್ಲಿ ರಾಹುಲ್ ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ಕೆಲವೆಡೆ ರೈತರ ಮನೆಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದ್ದಾರೆ.
ಗುಂಜಿಯಲ್ಲಿ ಇತ್ತೀಚೆಗಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ನಿಲೇಶ್ ವಾಲ್ಕೆ ಮತ್ತು ಅಂಬಾದಾಸ್ ವಾಹ್ಲಿಲೆ ಕುಟುಂಬದ ಸದಸ್ಯರನ್ನು ರಾಹುಲ್ ಭೇಟಿ ಮಾಡಿದರು. ಪ್ರಸ್ತುತ ರಾಹುಲ್ ಗಾಂಧಿ ಪಾದಯಾತ್ರೆ ಶಹಾಪುರ್ ಗ್ರಾಮದಲ್ಲಿದ್ದು ಅಲ್ಲಿಂದ ಖುನಾ ಗ್ರಾಮಕ್ಕೆ ತೆರಳಿ ರೈತರ ಸಮಸ್ಯೆ ಆಲಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ತಿಳಿಸಿದ್ದಾರೆ.