ಬೆಂಗಳೂರು : ಕೇಂದ್ರ ಸರ್ಕಾರದ 'ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ- 2015'ನ್ನು ವಿರೋಧಿಸಿ ವಿವಿಧ ಸಾರಿಗೆ ನೌಕರರ ಸಂಘಟನೆಗಳು ಮತ್ತು ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೆಚ್ಚಿನ ಸಾರಿಗೆ ವಾಹನಗಳ ಸಂಚಾರ ಬಹುತೇಕ ಸ್ತಬ್ಧವಾಗಿದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಕೆಲ ಸರ್ಕಾರಿ ಬಸ್ ಗಳೂ ಸಂಚಾರಕ್ಕಿಳಿದಿವೆ. ಉಡುಪಿ ಮತ್ತು ಮಂಗಳೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಗಳ ಸಂಚಾರ ಸ್ತಬ್ಧವಾಗಿದೆ. ಆದರೆ ಕೆಲ ಸಿಟಿ ಬಸ್ ಮತ್ತು ಸರ್ವಿಸ್ ಬಸ್ ಗಳು ಸಂಚಾರಕ್ಕಿಳಿದಿವೆ.
ಬೆಂಗಳೂರಿನಲ್ಲಿ ಸಂಚಾರಕ್ಕಿಳಿದ ಕೆಲ ಬಿಎಂಟಿಸಿ ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲೂ ತೂರಾಟ ನಡೆಸಿದ ಹಿನ್ನಲೆಯಲ್ಲಿ ಹೆಚ್ಚಿನ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ರಾಜ್ಯದ ಇತರ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದು, ಖಾಸಗಿ ಬಸ್ ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ.
ಕೆ.ಎಸ್.ಆರ್.ಟಿ.ಸಿ, ಎನ್.ಇ.ಕೆ.ಆರ್.ಟಿ.ಸಿ, ಎನ್.ಡಬ್ಲೂ.ಕೆ.ಆರ್.ಟಿ.ಸಿ ಹಾಗೂ ಬಿಎಂಟಿಸಿ ನೌಕರರ ಸಂಘಟನೆಗಳು, ಆಟೋ ಚಾಲಕರ ಕೆಲವು ಸಂಘಟನೆಗಳು ಬಂದ್ ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದರಿಂದ ರಾಜ್ಯಾದ್ಯಂತ ಸಾರಿಗೆ ಬಸ್ ಗಳು ಮತ್ತು ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ರಸ್ತೆಗೆ ಇಳಿಯುವುದಿಲ್ಲ. ಬೆಂಗಳೂರಿನಲ್ಲಿ ಆಟೋಗಳು ಮುಷ್ಕರ ನಡೆಸಿವೆ. ಆದರೆ ಕೆಲವು ಆಟೋ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲದ ಕಾರಣ ಅಲ್ಲೊಂದು ಇಲ್ಲೊಂದು ಆಟೋ ಸಂಚರಿಸುತ್ತಿದೆ. ಅದೇ ರೀತಿ ಲಾರಿ ಮಾಲಿಕರ ಸಂಘಟನೆ ಮತ್ತು ಟೂರಿಸ್ಟ್ ಟ್ಯಾಕ್ಸಿ ಮಾಲಿಕರ ಸಂಘ ಬಂದ್ ಗೆ ನೈತಿಕ ಬೆಂಬಲ ಮಾತ್ರ ಸೂಚಿಸಿದೆ.
ಆದರೆ, ಲಾರಿಗಳು ಟ್ಯಾಕ್ಸಿಗಳ ಸಂಚಾರಕ್ಕೆ ಯಾವುದೇ ಬಾಧೆ ಉಂಟಾಗಿಲ್ಲ. ಖಾಸಗಿ ಬಸ್ ಗಳ ಮಾಲಿಕರು ಬಂದ್ ಗೆ ಬೆಂಬಲ ನೀಡಿಲ್ಲ. ಹೀಗಾಗಿ ಖಾಸಗಿ ಬಸ್ ಗಳು ಸಂಚರಿಸುವ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ನೆರೆ ರಾಜ್ಯಗಳಿಗೆ ಬಸ್ ಸಂಚಾರ ಎಂದಿನಂತೆ ಇದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮತ್ತು ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರಕ್ಕೆ ದಿನನಿತ್ಯ ಚಲಿಸುವ 10 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ಗಳು ಬುಧವಾರ ಸಂಜೆ ಎಂದಿನಂತೆ ನಿಗದಿತ ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಆದೇ ರೀತಿ ಗುರುವಾರದ ಬುಕ್ಕಿಂಗ್ ಸಹ ಫುಲ್ ಆಗಿದೆ ಎಂದು ಖಾಸಗಿ ಬಸ್ಗಳ ಮಾಲಿಕರ ಒಕ್ಕೂಟ ಸ್ಪಷ್ಟಪಡಿಸಿದೆ.
ಇನ್ನು ಆಸ್ಪತ್ರೆ, ಔಷಧಿ, ಪೆಟ್ರೋಲ್ ಬಂಕ್, ಹಾಲು, ತರಕಾರಿ ಸೇರಿದಂತೆ ಇನ್ನಿತರ ಅಗತ್ಯ ಸೇವೆಗಳು ಎಂದಿನಂತೆ ಲಭ್ಯವಾಗಿದೆ. ಬಂದ್ನ ಕಾರಣಕ್ಕೆ ಸಿಇಟಿ ಪರೀಕ್ಷೆ ಸೇರಿದಂತೆ ಬೆಂಗಳೂರು, ಮಂಗಳೂರು ವಿವಿಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.