ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆಯನ್ನು ವಿರೋಧಿಸಿ ಅಖಿಲ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ದೇಶಾದ್ಯಂತ ನೀಡಿರುವ ಮುಷ್ಕರಕ್ಕೆ ರಾಜ್ಯದಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರದ ಮಸೂದೆಯನ್ನು ಕಾರ್ಮಿಕ ಸಂಘಗಳು, ವಾಹನ ಚಾಲಕರ ಸಂಘಟನೆಗಳು ವಿರೋಧಿಸಿರುವ ಹಿನ್ನೆಲೆಯಲ್ಲಿ ಏ.30ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಯಾವುದೆ ಸರ್ಕಾರಿ ಬಸ್ ಹಾಗೂ ಆಟೋಗಳು ರಸ್ತೆಗೆ ಇಳಿಯುವುದಿಲ್ಲ. ಇದರಿಂದಾಗಿ ಪ್ರಯಾಣಿಕ ಮತ್ತೊಮ್ಮೆ ಸಂಕಷ್ಟ ಎದುರಿಸಬೇಕಾಗಿದೆ. ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಜಂಟಿ ಕಾರ್ಯದರ್ಶಿ ರಾಜಗೋಪಾಲ್ ನಾಳೆ 26 ಸಾವಿರ ಸರ್ಕಾರಿ ಬಸ್ ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರಿ ಸಂಸ್ಥೆಗಳು ಬಂದ್ ಗೆ ಕರೆ ನೀಡಿದ್ದರೆ ಖಾಸಗಿ ಬಸ್ ಗಳ ಚಾಲಕರು ಬಂದ್ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತರುವ ಮಸೂದೆಯಲ್ಲಿ ಚಾಲಕರಿಗೆ ಮಾರಕವಾಗುವ ಅಂಶಗಳಿವೆ. ಆದ್ದರಿಂದ ಮಸೂದೆಯನ್ನು ವಿರೋಧಿಸುತ್ತಿರುವುದಾಗಿ ಸರ್ಕಾರಿ ಸಂಸ್ಥೆಗಳು ತಿಳಿಸಿವೆ. ಕೆಲ ಅಂಶಗಳನ್ನು ಮಾತ್ರ ಬದಲಾವಣೆ ಮಾಡಬೇಕೆಂಬುದು ತಮ್ಮ ಒತ್ತಾಯ ಎಂದು ಬಂದ್ ಗೆ ಕರೆ ನೀಡಿರುವ ಸಂಘಟನೆಗಳು ತಿಳಿಸಿವೆ.
ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯಲ್ಲಿ ಚಾಲಕ ಸಿಗ್ನಲ್ ಜಂಪ್ ಮಾಡಿದರೆ ಮೊದಲ ಎರಡು ಬಾರಿ ದಂಡ ಹಾಗೂ ಮೂರನೇ ಬಾರಿ ಪುನರಾವರ್ತನೆಯಾದರೆ 1,500 ರೂ. ದಂಡ ಮತ್ತು ಒಂದು ತಿಂಗಳು ಚಾಲನಾ ಪರವಾನಗಿ ರದ್ದತಿ ಶಿಕ್ಷೆಯನ್ನು ವಿಧಿಸಲಾಗಿದೆ.
ಅಪಘಾತವಾದಾಗ ಪಾದಚಾರಿಗಳು ಗಾಯಗೊಂಡರೆ ಅಥವಾ ಸಾವನ್ನಪ್ಪಿದಲ್ಲಿ ಕಾರಣನಾದ ಚಾಲಕನಿಗೆ ಒಂದು ಲಕ್ಷ ರೂ. ದಂಡ ಮತ್ತು ನಾಲ್ಕು ವರ್ಷ ಜೈಲು ಶಿಕ್ಷೆಯನ್ನೂ ಹೊಸ ಕಾಯ್ದೆಯಲ್ಲಿ ಸೇರಿಸಲಾಗಿದೆ. ಈ ಎಲ್ಲಾ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಆಗ್ರಹಿಸಿ ಸರ್ಕಾರಿ ಚಾಲಕರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.