ತುಮಕೂರು : ರಾಜ್ಯದಲ್ಲಿ ಉಚಿತವಾಗಿ ಅಕ್ಕಿ ನೀಡುತ್ತಿರೋರು ಯಾರು ಎಂಬ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಪ್ರಶ್ನೆಗೆ, ಜನರು ಬಿ.ಎಸ್,ಯಡಿಯೂರಪ್ಪ ಎಂಬ ಉತ್ತರ ಉತ್ತರ ನೀಡಿದ್ದು, ಇದನ್ನು ಕೇಳಿ ಸಚಿವರು ತಬ್ಬಿಬ್ಬಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಶಾಂತಿನಗರಕ್ಕೆ ಭೇಟಿ ನೀಡಿದ ಸಚಿವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಪರಿಶೀಲನೆ ನಡೆಸಿ, ಜನರ ಕಷ್ಟ, ಸುಖ ವಿಚಾರಿಸಿದರು. ಆಗ ಸಚಿವರು ಉಚಿತ ಅಕ್ಕಿ ನೀಡುತ್ತಿರೋರು ಯಾರು ಎಂದು ನಿವಾಸಿಗಳಿಗೆ ಪ್ರಶ್ನೆ ಕೇಳಿದ್ದರು.
ಈ ಪ್ರಶ್ನೆಗೆ ಅಲ್ಲಿನ ನಿವಾಸಿಗಳು ಕೊಟ್ಟ ಉತ್ತರ ಮಾಜಿ ಸಿಎಂ ಯಡಿಯೂರಪ್ಪ ಎಂದು. ಇದನ್ನು ಕೇಳಿ ಗಾಬರಿಯಾದ ಆಂಜನೇಯ, ಉಚಿತ ಅಕ್ಕಿ ಕೊಡುತ್ತಿರೋದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಮನವರಿಕೆ ಮಾಡಿಕೊಟ್ಟರು.
ನಾವು ಯೋಜನೆಗಳ ಪ್ರಚಾರದಲ್ಲಿ ಹಿಂದುಳಿದಿದ್ದೇವೆ. ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ, ಸರಿಯಾದ ನಿಟ್ಟಿನಲ್ಲಿ ಪ್ರಚಾರ ಕೊಡಬೇಕಾದ ಅಗತ್ಯವಿದೆ ಎಂದು ಸಚಿವರು ಹೇಳಿದರು.