ನವದೆಹಲಿ : 'ಸರ್ಪಂಚ್-ಪತಿ' ಪದ್ಧತಿಗಳು ಕೊನೆಯಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗ್ರಾಮೀಣ ಭಾಗದಲ್ಲಿ ಬಡತನ ನಿರ್ಮೂಲನೆಯಾಗಬೇಕಾದರೆ ಚುನಾವಣೆಯ ಮೂಲಕ ಆಯ್ಕೆಯಾಗಿರುವ ಗ್ರಾಮಪಂಚಾಯ್ತಿಗಳ ಸದಸ್ಯರೇ ಆಡಳಿತ ನಡೆಸಬೇಕಿದೆ. ಆಯ್ಕೆಯಾದ ಮಹಿಳೆಯರ ಪತಿಯರು ಆಡಳಿತ ನಡೆಸುವ ಸಂಪ್ರದಾಯ ಕೊನೆಯಾಗಬೇಕಿದೆ ಎಂದು ಕರೆ ನೀಡಿದ್ದಾರೆ.
ಹಿಂದಿನ ರಾಜಕೀಯ ಕಾರ್ಯಕ್ರಮವೊಂದನ್ನು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಕಾರ್ಯಕ್ರಮದಲ್ಲಿ ಉಪಸ್ಥಿತನಿದ್ದ ವ್ಯಕ್ತಿ ತನ್ನನ್ನು ಸರ್ಪಂಚ್-ಪತಿ ಎಂದು ಪರಿಚಯಿಸಿಕೊಂಡ, ಈ ರೀತಿ ಎಸ್.ಪಿ ವ್ಯವಹಾರ ಮುಂದುವರೆಯುತ್ತಿದೆ. ಕಾನೂನು ನಮ್ಮ ದೇಶದ ಮಹಿಳೆಯರನ್ನು ಸಬಲಗೊಳಿಸಿದೆ. ಕಾನೂನು ಅವರಿಗೆ ಸಮಾನ ಹಕ್ಕು ನೀಡಿರುವಾಗ ಅದನ್ನು ಬಳಸಿಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ.
ಪಂಚಾಯಿತಿಗಳ ಬಗ್ಗೆ ಮುಂದುವರೆದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಳ್ಳಿಗಳಿಂದ ಭಾರತ ಜೀವಿಸುತ್ತಿದೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗ ನಾವು ಹಳ್ಳಿಗಳನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ನಾಗರಿಕನೂ ವಿದ್ಯಾವಂತನಾಗಬೇಕು. ಮಕ್ಕಳು ಶಾಲೆಗಳಿಗೆ ಹೆಚ್ಚಾಗಿ ಬರುವಂತ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಮಗುವು ಶಿಕ್ಷಣ ಪಡೆಯಬೇಕು, ಇದಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಹೇಳಿದ್ದಾರೆ.