ಹರ್ಯಾಣ : 'ಯೋಗ' ಗುರು ಬಾಬಾ ರಾಮ್ ದೇವ್, ಹರ್ಯಾಣ ಸರ್ಕಾರ ತಮಗೆ ನೀಡಲು ಮುಂದಾಗಿದ್ದ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನವನ್ನು ನಿರಾಕರಿಸಿದ್ದಾರೆ.
ತಾನೊಬ್ಬ ಸಂನ್ಯಾಸಿ, ಕ್ಯಾಬಿನೆಟ್ ಸಚಿವರಿಗೆ ನೀಡಲಾಗುವ ಯಾವುದೇ ಸೌಲಭ್ಯಗಳನ್ನು ಪಡೆಯುವುದಿಲ್ಲ ಎಂದು ರಾಮ್ ದೇವ್ ಸ್ಪಷ್ಟಪಡಿಸಿದ್ದಾರೆ. ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, ಯೋಗ ಹಾಗೂ ಆಯುರ್ವೇದವನ್ನು ಪ್ರಮೋಟ್ ಮಾಡಲು ಜನವರಿಯಲ್ಲಿ ಬಾಬಾ ರಾಮ್ ದೇವ್ ಅವರನ್ನು ಹರ್ಯಾಣದ ರಾಯಭಾರಿಯನ್ನಾಗಿ ನೇಮಕ ಮಾಡಿದ್ದರು. ಈ ಬೆನ್ನಲ್ಲೇ ಬಾಬಾ ರಾಮ್ ದೇವ್ ಅವರಿಗೆ ಹರ್ಯಾಣ ಸರ್ಕಾರ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನವನ್ನು ನೀಡುವ ಪ್ರಸ್ತಾವನೆ ಹೊಂದಿತ್ತು.
ಬಾಬಾ ರಾಮ್ ದೇವ್ ಅವರನ್ನು ಹರ್ಯಾಣ ಸರ್ಕಾರದ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದೆಂದು ಸರ್ಕಾರ ಬಹಿರಂಗವಾಗಿ ಘೋಷಿಸಿತ್ತು. ಆದರೆ ಈ ಬಗ್ಗೆ ವರದಿಗಳನ್ನು ತಳ್ಳಿಹಾಕಿರುವ ಬಾಬಾ ರಾಮ್ ದೇವ್, ತಾವೊಬ್ಬ ಸಂನ್ಯಾಸಿಯಾಗಿದ್ದು ತಮಗೆ ಸಚಿವ ಸ್ಥಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.
ಹರ್ಯಾಣದಲ್ಲಿ ಗಿಡಮೂಲಿಕೆ ಅರಣ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಬಾಬಾ ರಾಮ್ ದೇವ್ ಅವರಿಗೆ ಸಚಿವ ಸ್ಥಾನ ನೀಡಲು ತೀರ್ಮಾನಿಸಲಾಗಿತ್ತು ಎಂದು ಹರ್ಯಾಣ ಸರ್ಕಾರ ತಿಳಿಸಿದೆ.