ನವದೆಹಲಿ :
ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್, ಇದೀಗ ವಿವಾದಿತ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ರಾಜಕೀಯ ಅಸ್ತ್ರವನ್ನಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜಾಗಿದೆ.
www.zameenwapasi.com ಎಂಬ ವೆಬ್ ಸೈಟ್ ಗೆ ಕಾಂಗ್ರೆಸ್ ಚಾಲನೆ ನೀಡಿದೆ. ದೆಹಲಿಯಲ್ಲಿ ನಡೆಯಲಿರುವ ಬೃಹತ್ ಕಿಸಾನ್ ರ್ಯಾಲಿ ಮುನ್ನಾ ದಿನವೇ "ಜಮೀನ್ ವಾಪಸಿ' ವೆಬ್ ಸೈಟ್ ಅನಾವರಣಗೊಳಿಸಿ, ಸಾಮಾಜಿಕ ತಾಣಗಳ ಮೂಲಕ ಹೋರಾಟಕ್ಕೆ ಅಣಿಯಾಗಿದೆ.
ಭೂಸ್ವಾಧೀನ ತಿದ್ದುಪಡಿ ಕಾಯ್ದೆಯ ಪರಿಣಾಮಗಳು, ರೈತರಿಗೆ ಎದುರಾಗುವ ಸಮಸ್ಯೆಗಳು, ಕಾಯ್ದೆ ಕುರಿತು ಮೋದಿ ಸರ್ಕಾರ ದಿಕ್ಕು ತಪ್ಪಿಸುತ್ತಿರುವ ವಿಷಯಗಳ ಬಗ್ಗೆ ಈ ವೆಬ್ ಸೈಟ್ ನಲ್ಲಿ ವಿಸ್ತೃತವಾಗಿ ಬೆಳಕು ಚೆಲ್ಲಲಾಗುವುದು. ಪ್ರತಿದಿನ ವೆಬ್ ಸೈಟ್ ಅನ್ನು ಪರಿಷ್ಕೃತಗೊಳಿಸಲಾಗುವುದು ಎಂದು ವೆಬ್ ಸೈಟ್ ಬಿಡುಗಡೆ ಬಳಿಕ ಕಾಂಗ್ರೆಸ್ ಹಿರಿಯ ನಾಯಕ ಜೈರಾಂ ರಮೇಶ್ ತಿಳಿಸಿದ್ದಾರೆ.
ಸರ್ಕಾರವು ತನ್ನ ವೆಬ್ ಸೈಟ್ ನಲ್ಲಿ ಹಾಕಿರುವ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯ ಅಂಶಗಳಲ್ಲಿ, ಅದರ ಪರಿಣಾಮವೇನಾಗುತ್ತದೆ ಎಂಬುದನ್ನು ತಿಳಿಸದೇ ಸತ್ಯ ಮಾರೆಮಾಚುತ್ತಿದೆ. ಆದರೆ, ಈ ಕಾಯ್ದೆಯಿಂದ ರೈತರ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದರ ವಿವರವನ್ನು ಇಲ್ಲಿ ಕೊಡಲಾಗಿದೆ ಎಂದು ಜೈರಾಂ ಹೇಳಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು, ಕೇಂದ್ರ ಸರ್ಕಾರಕ್ಕೆ ತಾಕತ್ತಿದ್ದರೆ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಕುರಿತು ಬಹಿರಂಗ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದರು. ಭೂಸ್ವಾಧೀನ ಮಸೂದೆ ಬಗ್ಗೆ ಚರ್ಚೆಗೆ ಸಿದ್ಧ ಎಂದು ವಿಪಕ್ಷ ನಾಯಕರಿಗೆ ಪತ್ರ ಬರೆಯುವ ಕೇಂದ್ರ ಸರ್ಕಾರ, ಸುಗ್ರೀವಾಜ್ಞೆ ಹೊರಡಿಸುತ್ತಿರುವುದಾದರೂ ಏಕೆ ಎಂದು ಅವರು ಪ್ರಶ್ನಿಸಿದರು.