ನವದೆಹಲಿ : ಹಳೆ ಜನತಾ ಪರಿವಾರದ ಪಕ್ಷಗಳ ವಿಲೀನದಿಂದ ಪ್ರಾರಂಭವಾಗಿಲಿರುವ ಹೊಸ ಪಕ್ಷ ಅಸ್ಥಿತ್ವಕ್ಕೆ ಬರಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಮುಲಾಯಂ ಸಿಂಗ್ ಯಾದವ್ ಗಮನ ಹರಿಸಲಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಜನತಾ ಪರಿವಾರದ ಪಕ್ಷಗಳ ವಿಲೀನದಿಂದ ಅಸ್ಥಿತ್ವಕ್ಕೆ ಬಂದಿರುವ ಹೊಸ ರಾಜಕೀಯ ಪಕ್ಷಕ್ಕೆ ಮುಲಾಯಂ ಸಿಂಗ್ ಯಾದವ್ ಅವರು ಅಧ್ಯಕ್ಷರಾಗಿದ್ದಾರೆ. ಆದ್ದರಿಂದ ಹೊಸ ಪಕ್ಷ ಅಸ್ಥಿತ್ವಕ್ಕೆ ಬರಲು ಅಗತ್ಯವಿರುವ ಪಕ್ಷದ ಚಿಹ್ನೆ, ಹೆಸರುಗಳನ್ನು ಮುಲಾಯಂ ಸಿಂಗ್ ಯಾದವ್ ಅವರೇ ತೀರ್ಮಾನಿಸಲಿದ್ದಾರೆ. ಕಾನೂನು ಪ್ರಕ್ರಿಯೆಗಳ ಬಗ್ಗೆಯೂ ಸಹ ಮ್ಮುಲಾಯಂ ಸಿಂಗ್ ಯಾದವ್ ಅವರೇ ಗಮನ ಹರಿಸಲಿದ್ದಾರೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ಜನತಾ ಪರಿವಾರ ವಿಲೀನಗೊಳ್ಳುತ್ತಿರುವುದನ್ನು ಟೀಕಿಸಿದ್ದ ಬಿಜೆಪಿ, ಪಕ್ಷದ ಚಿಹ್ನೆಯೇ ಇಲ್ಲದೇ ವಿಲೀನಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಜನತಾ ಪರಿವಾರದ ನಾಯಕರ ಬಗ್ಗೆ ಲೇವಡಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್, ಎಲ್ಲಾ ಹೊಣೆಯನ್ನು ಮುಲಾಯಂ ಸಿಂಗ್ ಯಾದವ್ ಹೆಗೆಲಿಗೇರಿಸಿದ್ದಾರೆ.
ಏ.15ರಂದು ನಡೆದ ಸಭೆಯಲ್ಲಿ ಹಳೆ ಜನತಾ ಪರಿವಾರದ ಆರು ಪಕ್ಷಗಳನ್ನು ವಿಲೀನಗೊಳಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಈ ವರೆಗೂ ಹೊಸ ಪಕ್ಷಕ್ಕೆ ಚಿಹ್ನೆಯನ್ನು ನಿರ್ಧರಿಸಲಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು, ಜೆಡಿ(ಯು), ಆರ್.ಜೆ.ಡಿ, ಐ.ಎನ್.ಎಲ್.ಡಿ, ಜೆಡಿ(ಎಸ್)ಪಕ್ಷಗಳ ನಾಯಕರು ವಿಲೀನಕ್ಕೆ ಒಪ್ಪಿಗೆ ಸೂಚಿಸಿದ್ದರು.