ಬರ್ಲಿನ್ : 'ಜರ್ಮನಿ ಪ್ರವಾಸ'ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಾಗಿ ಸ್ವಾತಂತ್ರ್ಯ ಹೋರಾಟಗಾರ, ಐ.ಎನ್.ಎ ಸ್ಥಾಪಕ ಸುಭಾಷ್ ಚಂದ್ರ ಬೋಸ್ ಅವರ ಸೋದರಳಿಯ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಅವರು ಸುಭಾಷ್ ಚಂದ್ರ ಬೋಸ್ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಸತತ 20 ವರ್ಷಗಳ ಕಾಲ ಬೇಹುಗಾರಿಕೆ ನಡೆಸಿದ್ದರು ಎಂಬ ಅಘಾತಕಾರಿ ವಿಷಯ ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜರ್ಮನಿಯೂ ಸೇರಿದಂತೆ ತ್ರಿರಾಷ್ಟ್ರಗಳ ಪ್ರವಾಸ ಕೈಗೊಂಡ ಬೆನ್ನಲ್ಲೇ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಮೇಲೆ ಮಾಜಿ ಪ್ರಧಾನಿ ನೆಹರು ಬೇಹುಗಾರಿಕೆ ನಡೆಸಿರುವ ಬಗ್ಗೆ ಮಾಹಿತಿ ಬಯಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋಸ್ ಕುಟುಂಬದ ಸದಸ್ಯರು, ನೇತಾಜಿಗೆ ಸಂಬಂಧಿಸಿದ ಎಲ್ಲಾ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇನ್ನು ಜರ್ಮನಿಯಲ್ಲಿರುವ ಸುಭಾಷ್ ಚಂದ್ರ ಬೋಸ್ ಅವರ ಸೋದರಳಿಯ ಸೂರ್ಯ ಕುಮಾರ್ ಬೋಸ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸುವ ಬಗ್ಗೆ ಮಾತುಕತೆ ನಡೆಸಲಿರುವುದಾಗಿ ತಿಳಿಸಿದ್ದಾರೆ.
ಸುಭಾಷ್ ಚಂದ್ರ ಬೋಸರು, ತಮ್ಮ ಕುಟುಂಬಕ್ಕೆ ಮಾತ್ರ ಸೇರಿದವರಲ್ಲ, ಇಡೀ ದೇಶವೇ ಅವರ ಕುಟುಂಬವಾಗಿದೆ. ಬೋಸರ ಕುಟುಂಬದ ವಿರುದ್ಧ ಬೇಹುಗಾರಿಕೆ ನಡೆಸಿರುವುದು ಅತ್ಯಂತ ನೋವುಂಟಾಗಿದೆ ಎಂದು ಸೂರ್ಯ ಕುಮಾರ್ ಬೋಸ್ ಹೇಳಿದ್ದಾರೆ.
ನೆಹರು, ಬೋಸರ ವಿರುದ್ಧ ಬೇಹುಗಾರಿಕೆ ನಡೆಸಿದ್ದರು ಎಂಬ ಮಾಹಿತಿ ಬಯಲಾಗುತ್ತಿದ್ದಂತೆಯೇ, ಬೋಸರಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿವೆ.