ಇಸ್ಲಾಮಾಬಾದ್ : 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಮಾಂಡರ್ ಝಕೀ ಉರ್ ರೆಹಮಾನ್ ಲಖ್ವಿಯನ್ನು ಭಾರತದ ತೀವ್ರ ವಿರೋಧದ ನಡುವೆಯೂ ರಹಸ್ಯವಾಗಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಕೋರ್ಟ್ ಆದೇಶದಂತೆ ಹತ್ತು ಲಕ್ಷ ರೂಪಾಯಿಗಳ ಎರಡು ಬಾಂಡ್ ಅನ್ನು ಲಖ್ವಿ ನೀಡಿದ್ದು, ಆತನನ್ನು ರಹಸ್ಯವಾಗಿ ರಾವಲ್ಪಿಂಡಿಯ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನದ ಈ ನಡೆ ಭಾರತದ ದ್ವಿಪಕ್ಷೀಯ ಮಾತುಕತೆ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಾರ್ವಜನಿಕ ಸುರಕ್ಷತೆ ಕಾಯಿದೆಯಡಿ 26/11ರ ಮುಂಬೈ ದಾಳಿಯ ಸೂತ್ರಧಾರ, ಎಲ್.ಇ.ಟಿ ಕಮಾಂಡರ್ ಝಕೀ ಉರ್ ರೆಹಮಾನ್ ಲಖ್ವಿಯನ್ನು ಬಂಧನದಲ್ಲಿರಿಸಿದ್ದ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಸರ್ಕಾರ ನೀಡಿದ್ದ ಆದೇಶವನ್ನು ಲಾಹೋರ್ ಹೈಕೋರ್ಟ್ ಗುರುವಾರ ಅಮಾನತಿನಲ್ಲಿರಿಸಿ, ತಕ್ಷಣವೇ ಲಖ್ವಿಯನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತ್ತು.