ನವದೆಹಲಿ : ಕಲ್ಲಿದ್ದಲು ಹಗರಣದಲ್ಲಿ ಆರೋಪಿಯಾಗಿ ಕೋರ್ಟಿಗೆ ಹಾಜರಾಗಲು ಸಮನ್ಸ್ ಪಡೆದಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಕೇಸಿನ ಬಗ್ಗೆ ಇನ್ನು ಕನಿಷ್ಠ 3 ವರ್ಷ ನಿರಾಳವಾಗಿರಬಹುದು. ಏಕೆಂದರೆ 2018ಕ್ಕೆ ಮೊದಲು ಮನಮೋಹನ್ ಸಿಂಗ್ ವಿರುದ್ಧದ ಕಲ್ಲಿದ್ದಲು ಕೇಸು ಸುಪ್ರೀಂ ಕೋರ್ಟಿನ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇಲ್ಲ.
ಮನಮೋಹನ್ ಸಿಂಗ್ ಗೆ ಜಾರಿಯಾಗಿರುವ ಸಮನ್ಸ್ ಈಗ ಬಹುತೇಕ ಡೀಪ್ ಫ್ರೀಜರ್ ಗೆ ಹೋಗಿದ್ದು ಮುಂದಿನ ಮೂರು ವರ್ಷಗಳ ವರೆಗೆ ಮನಮೋಹನ್ ಸಿಂಗ್ ಕೇಸು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಗಳಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.
ಏಪ್ರಿಲ್ 1ರಂದು ಜಸ್ಟೀಸ್ ವಿ. ಗೋಪಾಲ ಗೌಡ ಮತ್ತು ಸಿ ನಾಗಪ್ಪನ್ ಅವರನ್ನು ಒಳಗೊಂಡ ಪೀಠವು ಮನಮೋಹನ್ ಸಿಂಗ್ ಅವರ ಮೇಲ್ಮನವಿಯನ್ನು ವಿಚಾರಣೆಗೆ ಸ್ವೀಕರಿಸಿ ಕೆಳ ನ್ಯಾಯಾಲಯವು ಮಾಜಿ ಪ್ರಧಾನಿ ಮತ್ತು ಇತರ ಆರೋಪಿಗಳ ವಿರುದ್ಧ ಕಲ್ಲಿದ್ದಲು ಹಗರಣದ ಕೇಸಿನಲ್ಲಿ ಜಾರಿಯಾಗಿರುವ ಸಮನ್ಸ್ ಮತ್ತು ಆ ಕುರಿತ ಯಾವುದೇ ವಿಚಾರಣೆಗೆ ತಡೆ ನೀಡಿದೆ.
ಕಾನೂನೊಂದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಸಲ್ಪಿಸಲ್ಪಡುವ ವಿಶೇಷ ಅನುಮತಿಯ ಮೇಲ್ಮನವಿಯನ್ನು ನ್ಯಾಯಾಲಯವು ವಿಚಾರಣೆಗೆ ಸ್ವೀಕರಿಸಿದ್ದೇ ಆದಲ್ಲಿ ಆ ಪ್ರಕರಣದ ವಿಚಾರಣಾ ಪ್ರಕ್ರಿಯೆಗೆ "ವಿಶೇಷವಾದ ಅರ್ಥವಿದೆ'.
ಕಾನೂನಿನ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿ ಸಲ್ಲಿಸಲ್ಪಡುವ ಮೇಲ್ಮನಿಯವನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದಾಗ ನ್ಯಾಯಾಲಯವು ಮುಂದಿನ ದಿನಾಂಕಗಳನ್ನು ನಿಗದಿಸದೆ ಒಟ್ಟು ಪ್ರಕರಣದ ವಿಚಾರಣೆಯನ್ನು ತಡೆಹಿಡಿಯಬಹುದಾಗಿದೆ.
1988ರ ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆ.13(1)(ಡಿ)(3)ರ ಸಾಂವಿಧಾನಿಕ ಸಿಂಧುತ್ವದಂತಹ ಮಹತ್ವದ ಕಾನೂನು ಪ್ರಶ್ನೆಯನ್ನು ಅರ್ಜಿದಾರರ ಎತ್ತಿರುವುದರಿಂದ ಈ ಬಗ್ಗೆ ಕೂಲಂಕಷ ಪರೀಕ್ಷೆಗಾಗಿ ಸಮಯಾವಕಾಶ ಬೇಕಾಗಿದೆ ಎಂದು ಹೇಳಿ ಸುಪ್ರೀಂ ಕೋರ್ಟ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇತರರ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವುದರಿಂದ, ಇನ್ನು ಕನಿಷ್ಠ 3 ವರ್ಷಗಳ ಮಟ್ಟಿಗಾದರೂ ಈ ಕೇಸು ವಿಚಾರಣೆಗೆ ಬಾರದಿರುವ ಸಾಧ್ಯತೆಗಳೇ ಹೆಚ್ಚೆಂದು ಕಾನೂನು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.