ನವದೆಹಲಿ : ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುವುದಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇದ್ದು, ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ನೀಡಿದ್ದು, ತಮ್ಮ ಸರ್ಕಾರ ಜನಸಾಮಾನ್ಯರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ತಮ್ಮ ಸರ್ಕಾರ ಕಾರ್ಪೊರೇಟ್ ಹಾಗೂ ಕೈಗಾರಿಕೆಗಳ ಪರವಾಗಿ ಕೆಲಸ ನಿರ್ವಹಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಪ್ರಧಾನಿ ನರೇಂದ್ರ ಮೋದಿ, ನೀತಿ ಚಾಲಿತ ಸರ್ಕಾರ ನಡೆಸುವುದು ನಮ್ಮ ಗುರಿಯಾಗಿದೆ, ಮುಖೇಶ್ ಅಂಬಾನಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಂದರ್ಶನದ ಮುಂದುವರೆದ ಭಾಗದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆ ಮೇಲೆ ಉಂಟಾಗಿದ್ದ ಪ್ರತಿಕೂಲ ಪರಿಣಾಮಗಳನ್ನು ತಮ್ಮ ಸರ್ಕಾರ ಸರಿಪಡಿಸಿದೆ ಎಂದು ಮೋದಿ ಹೇಳಿದ್ದಾರೆ.
ಹಿಂದೆ ನಡೆದಿರುವ ಅವಘಡಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಸರ್ಕಾರದ ಸಾಧನೆಗಳನ್ನು ಗಮನಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ದೇಶ ಯಾವ ಸ್ಥಿತಿಯಲ್ಲಿರಬೇಕಾದರೆ ಜನತೆ ನಮ್ಮನ್ನು ಅಧಿಕಾರಕ್ಕೆ ತಂದರು? ಇಂದಿನ ಸ್ಥಿತಿ ಏನಿದೆ? ಎಂಬುದನ್ನು ತಿಳಿಯಬೇಕು, ಪ್ರಸ್ತುತ ಅಭಿವೃದ್ಧಿಯಲ್ಲಿ ನಿಷ್ಕ್ರಿಯತೆ ಇಲ್ಲ, ಆಡಳಿತದಲ್ಲಿ ಪಾರದರ್ಶಕತೆ ಬಗ್ಗೆ ಅನುಮಾನವಿಲ್ಲ ಎಂದು ಮೋದಿ ಹೇಳಿದ್ದಾರೆ.
ನಾವು ಬಡವರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ, ಸದುದ್ದೇಶಗಳನ್ನು ಹೊಂದಿರುವ ಉತ್ತಮ ಆಡಳಿತ ನಮ್ಮ ಸರ್ಕಾರದ ಹಾಲ್ಮಾರ್ಕ್, ಸಮಗ್ರತೆಯ ಮೂಲಕ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮಾಡುವುದು ನಮ್ಮ ಮೂಲ ಉದ್ದೇಶ ಎಂದು ಮೋದಿ ಹೇಳಿದ್ದಾರೆ.