ಚಿತ್ತೂರು : ಆಂದ್ರಪ್ರದೇಶದ ಇತ್ತೂರು ಜಿಲ್ಲೆಯಲ್ಲಿ ಭಾರೀ ಎನ್ ಕೌಂಟರ್ ನಡೆದಿದೆ. ರಕ್ತಚಂದನ ಕಳ್ಳಸಾಗಣೆ ಮಾಡುತ್ತಿದ್ದ 20 ಸ್ಮಗ್ಲರ್ ಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಚಿತ್ತೂರು ಜಿಲ್ಲೆಯ ಚಂದ್ರಗಿರಿಮಂಡಲ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಸ್ಪೆಷಲ್ ಟಾಸ್ಕ್ ಫೋರ್ಸ್ 20 ಸ್ಮಗ್ಲರ್ ಗಳನ್ನು ಒಮ್ಮೆಲೆ ಹತ್ಯೆಗೈದಿದೆ.
ಶ್ರೀನಿವಾಸ ಮಂಗಾಪುರ ಬಳಿ 11 ಸ್ಮಗ್ಲರ್ ಗಳ ಹತ್ಯೆಮಾಡಲಾಗಿದ್ದು, ಶ್ರೀವೆಟ್ಟು ಬಳಿ 9 ಸ್ಮಗ್ಲರ್ ಗಳ ಹತ್ಯೆ ಮಾಡಲಾಗಿದೆ. ರಕ್ತಚಂದನ ಕಳ್ಳಸಾಗಾಣಿಕೆಗೆ ಯತ್ನಿಸುತ್ತಿದ್ದಾಗ ಪೊಲೀಸರಿಂದ ಈ ದಾಳಿ ನಡೆದಿದೆ. ಹತ್ಯೆಗೀಡಾದವರು ತಮಿಳುನಾಡಿನ ಕೂಲಿ ಕಾರ್ಮಿಕರು ಎಂದು ತಿಳಿದುಬಂದಿದೆ. ಇದು ದೇಶದ ಇತಿಹಾಸದಲ್ಲೇ ದೊಡ್ಡ ಎನ್ ಕೌಂಟರ್ ಆಗಿದ್ದು, ಹಲವು ಅನುಮಾನಗಳಿಗೂ ಕಾರಣವಾಗಿದೆ.
ಸ್ಥಳಕ್ಕೆ ಆಂಧ್ರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತಚಂದನ ಮರ ಕದಿಯಲು 150 ಜನ ಕಳ್ಳರು ಬಂದಿದ್ದರೆಂದು ತಿಳಿದುಬಂದಿದೆ. ಈ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.
ಚಿತ್ತೂರು ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ಹಿನ್ನಲೆಯಲ್ಲಿ ಆಂಧ್ರಪ್ರದೇಶ ಡಿಜಿ-ಐಜಿಪಿ ರಾಮುಡು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ರಕ್ತ ಚಂದನ ಕಳ್ಳಸಾಗಾಣೆ ತಡೆಯಲು ಎನ್ ಕೌಂಟರ್ ಅನಿವಾರ್ಯವಾಗಿತ್ತು. ಇದರಿಂದ ಕಳ್ಳಸಾಗಣೆದಾರರಿಗೆ ಸಂದೇಶ ರವಾನೆಯಾಗಿದೆ. ರಾಜ್ಯದ ಪ್ರಾಕೃತಿಕ ಸಂಪತ್ತು ರಕ್ಷಿಸಲೆಂದು ಎನ್ ಕೌಂಡಟರ್ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.