ನವದೆಹಲಿ : ವಿದೇಶಿ ಬ್ಯಾಂಕ್ ಗಳಲ್ಲಿ ಕಪ್ಪು ಹಣ ಹೊಂದಿರುವ ವ್ಯಕ್ತಿಗಳು ತೆರಿಗೆ ಪಾವತಿಸಲು ಅನುಕೂಲವಾಗುವಂತೆ ನೂತನ ಕಪ್ಪು ಹಣ ಕಾಯ್ದೆಯಡಿ ಸರ್ವರಿಗೂ ಅನುಸರಣಾ ಯೋಗ್ಯವಾದ ಸಮಗ್ರ ಗವಾಕ್ಷಿ ಪದ್ಧತಿ ಜಾರಿಗೆ ತರಲಾಗುವುದು ಎಂದು ವಿತ್ತ ಸಚಿವ ಅರುಣ್ ಜೈಟ್ಲಿ ಹೇಳಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಿದ್ದ ಉದ್ಯಮ ಪ್ರತಿನಿಧಿಗಳ ಸಿಐಐ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ವಿದೇಶಗಳಲ್ಲಿರುವ ಗೌಪ್ಯವಾದ ನಗದು ಮತ್ತು ಸ್ಥಿರ-ಚರ ಆಸ್ತಿಗಳ ಘೋಷಣೆಗೆ ಮತ್ತು ಆದಾಯ ತೆರಿಗೆ ವಿಧಿಸುವುದಕ್ಕೆ
ಕಾನೂನಿನ ಸ್ವರೂಪವನ್ನು ಬದಲಾಯಿಸುವುದಕ್ಕೆ 2015ರ ಈ ಸಮಗ್ರ ಗವಾಕ್ಷಿ ಪದ್ಧತಿ ಕಾಯ್ದೆ ಸಹಕಾರಿಯಾಗಲಿದೆ. ಈ ಹಿಂದೆ ಯಾರು ಕಪ್ಪು ಹಣ ಸಂಗ್ರಹಣೆಯಲ್ಲಿ ತೊಡಗಿದ್ದರೋ ಅಂಥವರಿಗೆ ಇದು ನೆರವಾಗಲಿದೆ ಎಂದು ಹೇಳಿದರು.
ವಿದೇಶಿ ಬ್ಯಾಂಕ್ ಗಳಲ್ಲಿರುವ ಅಪಾರ ಪ್ರಮಾಣದ ಕಪ್ಪು ಹಣವನ್ನು ಭಾರತಕ್ಕೆ ವಾಪಸು ತರಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಅದಕ್ಕಾಗಿ ರೂಪಿಸಿರುವ ಹೊಸ ಕಾಯ್ದೆ ಸೂಕ್ತವಾಗಿದೆ. ಈ ಕಾಯ್ದೆಗೆ ಅಗತ್ಯಬಿದ್ದರೆ ಇನ್ನೂ ಕೆಲವು ಮಾರ್ಪಾಡುಗಳನ್ನು ತರುವ ಸಾಧ್ಯತೆಗಳೂ ಇವೆ ಎಂದು ತಿಳಿಸಿದ್ದಾರೆ.
ವಿದೇಶಗಳಿಂದ ಕಪ್ಪು ಹಣ ಮರಳಿ ತರುವ ವಿಷಯ ಜಾಗತಿಕವಾಗಿದೆ ಮತ್ತು ಜಿ-20 ರಾಷ್ಟ್ರಗಳೂ ಈ ವಿಷಯದಲ್ಲಿ ಪರಸ್ಪರ ಸಹಮತದಿಂದ ಪ್ರಯತ್ನಗಳನ್ನು ನಡೆಸುತ್ತಿರುವುದರಿಂದ, ವಿದೇಶಗಳಲ್ಲಿನ ನಗದು ಅಥವಾ ಆಸ್ತಿಗಳನ್ನು ಗೌಪ್ಯವಾಗಿಡಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಜೈಟ್ಲಿ ಅಭಿಪ್ರಾಯಪಟ್ಟರು.