ನವದೆಹಲಿ : ಸರಕು ಮತ್ತು ಸೇವಾತೆರಿಗೆ (ಜಿಎಸ್ಟಿ) ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸುವ ಸಂಬಂಧ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಅನಂತ್ ಕುಮಾರ್ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ ಜತೆಗೆ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಅರುಣ್ ಜೇಟ್ಲಿ, ಜಿಎಸ್ಟಿ ವಿಷಯದಲ್ಲಿ ಒಮ್ಮತಕ್ಕೆ ಬರುವ ಸಂಬಂಧ ಮಾತುಕತೆ ನಡೆಸಿದ್ದು, ಅಧಿವೇಶನ ಆರಂಭದ ಬಳಿಕ ಮತ್ತೊಮ್ಮೆ ಸಭೆ ಸೇರಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ಪ್ರಾಥಮಿಕ ಹಂತದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದು, ಪಕ್ಷದ ನಾಯಕರ ಜತೆಗೆ ಮಾತುಕತೆ ನಡೆಸಿ ನಮ್ಮ ಅಭಿಪ್ರಾಯ ಸಲ್ಲಿಸುವುದಾಗಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಅಜಾದ್ ತಿಳಿಸಿದರು.
ಜಿಎಸ್ಟಿ ಮಿತಿಯನ್ನು ಶೇ.18ಕ್ಕೆ ಮಿತಿಗೊಳಿಸುವಿಕೆ, ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ಹಾಗೂ ಅಂತಾರಾಜ್ಯ ಗಡಿ ನಡುವಿನ ಶೇ.1ರಷ್ಟು ಲೆವಿ ವಿಧಿಸುವುದನ್ನು ರದ್ದು, ಆದಾಯ ಹಂಚಿಕೆ ವಿಚಾರವಾಗಿ ರಾಜ್ಯಗಳ ನಡುವೆ ಎದ್ದಿರುವ ಗೊಂದಲಗಳನ್ನು ಬಗೆಹರಿಸುವಂತೆ ಕಾಂಗ್ರೆಸ್ ಪಟ್ಟುಹಿಡಿದಿದೆ ಎನ್ನಲಾಗಿದೆ.