ಲಖ್ನೌ : ಉತ್ತರ ಪ್ರದೇಶದ ಹಲವೆಡೆ ಕಳೆದೆರಡು ದಿನಗಳಿಂದ ಪ್ರಬಲವಾದ ಸುಂಟರಗಾಳಿ ಬೀಸುತ್ತಿದ್ದು, ಶನಿವಾರ ಮಧ್ಯಾಹ್ನದವರೆಗೆ 14 ಮಂದಿಯನ್ನು ಬಲಿ ತೆಗೆದುಕೊಂಡಿದೆ.
ಲಖ್ನೌ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಂಟರಗಾಳಿ ತೀವ್ರವಾಗಿದ್ದು 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ 8 ಮಂದಿ ಜೀವ ಕಳೆದುಕೊಂಡಿದ್ದಾರೆ. 320ಕ್ಕೂ ಹೆಚ್ಚು ಜಾಹಿರಾತು ಫಲಕಗಳು ನೆಲಕ್ಕಚ್ಚಿವೆ. ವಿದ್ಯುತ್ ಕಂಬಗಳು ಮತ್ತು ತಂತಿಗಳು ನೆಲಕ್ಕೆ ಅಪ್ಪಳಿಸಿರುವುದಿಂದ ಹಲವೆಡೆ ಕಳೆದ 20 ಗಂಟೆಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಉತ್ತರ ಪ್ರದೇಶದ ಹಲವೆಡೆ ಈಗ ಗೋಧಿ ಕಟಾವು ನಡೆಯುತ್ತಿದೆ. ಮಾವಿನ ಸೀಸನ್ ಕೂಡ ಪ್ರಾರಂಭವಾಗಿದೆ. ಸುಂಟರಗಾಳಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಕಳೆದ ವಾರ ಸುರಿದ ಭಾರಿ ಆಲಿಕಲ್ಲು ಮಳೆಗೆ ರೈತರು ಅರ್ಧದಷ್ಟು ಫಸಲು ಕಳೆದುಕೊಂಡಿದ್ದರು. ಈಗ ಸುಂಟರಗಾಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ.