ನವದೆಹಲಿ : 'ಜನತಾ ಪರಿವಾರ'ವನ್ನು ಒಗ್ಗೂಡಿಸುವ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಏ,4ರಂದು ನವದೆಹಲಿಗೆ ತೆರಳಲಿದ್ದಾರೆ.
ಈ ಹಿಂದಿನ ಜನತಾ ಪರಿವಾರದಲ್ಲಿದ್ದ ಆರು ಪಕ್ಷಗಳು ಮತ್ತೊಮ್ಮೆ ಒಗ್ಗೂಡುವ ಸಾಧ್ಯತೆ ಇದ್ದು, ಈ ಬಗ್ಗೆ ಹಳೆ ಜನತಾಪರಿವಾರದ ಮುಖಂಡರ ನಡುವೆ ಮಾತುಕತೆ ನಡೆಯುತ್ತಿದೆ. ಜನತಾ ಪರಿವಾರವನ್ನು ಒಗ್ಗೂಡಿಸಲು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ನೇತೃತ್ವ ವಹಿಸಲಿದ್ದಾರೆ ಎಂದು ಜೆಡಿಯು ರಾಜ್ಯಸಭಾ ಸದಸ್ಯ ಕೆ.ಸಿ ತ್ಯಾಗಿ ಹೇಳಿದ್ದಾರೆ.
ಜೆ.ಡಿ.ಎಸ್ ಮುಖಂಡ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಐ.ಎನ್.ಎಲ್.ಡಿ ಮುಖಂಡ ಓಂ ಪ್ರಕಾಶ್ ಚೌಟಾಲ, ಆರ್.ಜೆ.ಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರೊಂದಿಗೆ ಮುಲಾಯಂ ಸಿಂಗ್ ಯಾದವ್ ಅವರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಜನತಾ ಪರಿವಾರದಿಂದ ಒಡೆದು ಹೋಗಿದ್ದ ಪಕ್ಷಗಳು ವಿಲೀನವಾದ ನಂತರ ಪಕ್ಷದ ಚಿನ್ಹೆ ಹಾಗೂ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ತ್ಯಾಗಿ ತಿಳಿಸಿದ್ದಾರೆ. ಜನತಾ ದಳ ಅಥವಾ ಸಮಾಜವಾದಿ ಜನತಾ ಪಕ್ಷ ಎಂಬ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದ್ದು, ಮುಲಾಯಂ ಸಿಂಗ್ ಯಾದ ಇದರ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಹಳೆ ಜನತಾ ಪರಿವಾರದಿಂದ ಒಡೆದು ಹೋಗಿದ್ದ ಪಕ್ಷಗಳು ಮತ್ತೆ ವಿಲೀನಗೊಳ್ಳುವುದರ ಬಗ್ಗೆ ಏ.10ರಂದು ಅಂತಿಮ ನಿರ್ಧಾರ ಹೊರಬೀಳಲಿದೆ.