ಒರಿಸ್ಸಾ : ಹಲವು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕಲ್ಲಿದ್ದಲನ್ನು ತಮ್ಮ ನೇತೃತ್ವದ ಸರ್ಕಾರ ವಜ್ರವನ್ನಾಗಿ ಪರಿವರ್ತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಒರಿಸ್ಸಾದಲ್ಲಿ ಏ.1ರಂದು ರೂರ್ಕೆಲಾ ಉಕ್ಕು ಸ್ಥಾವರ ಉದ್ಘಾಟನೆ ಮಾಡಿ ಮಾತನಾಡಿದ ಮೋದಿ, ಕಲ್ಲಿದ್ದಲು ಈ ವರೆಗೂ ಸಮಸ್ಯೆಯಾಗಿ ಉಳಿದಿತ್ತು. ಆದರೆ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ, ಕಲ್ಲಿದ್ದಲನ್ನು ವಜ್ರಗಳನ್ನಾಗಿ ಪರಿವರ್ತಿಸಿ ಲಾಭ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯಿಂದ ಬಂದ ಹಣವನ್ನು ರಾಜ್ಯಗಳ ಅಭಿವೃದ್ಧಿಗೆ ನೀಡಲಾಗುವುದು, ಪ್ರಾಮಾಣಿಕತೆ ಎಂದಿಗೂ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಮೋದಿ ಹೇಳಿದ್ದಾರೆ. 204 ಕಲ್ಲಿದ್ದಲು ಗಣಿಗಳಲ್ಲಿ ಕೇವಲ 20 ಗಣಿಗಳನ್ನು ಹರಾಜು ಹಾಕಿದ್ದಕ್ಕೆ 2 ಲಕ್ಷ ಕೋಟಿ ರೂಪಾಯಿ ದೊರೆತಿದೆ. ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದು 10 ತಿಂಗಳು ಕಳೆದಿದೆ. ಆದರೆ ದುರಾಡಳಿತದ ಬಗ್ಗೆ ಅಪವಾದ ಬಾರದಂತೆ ಆಡಳಿತ ನಡೆಸಲಾಗುತ್ತಿದೆ. ಈ ಬಗ್ಗೆ ತಮಗೆ ಹೆಮ್ಮೆ ಇದೆ ಎಂದು ಮೋದಿ ತಿಳಿಸಿದ್ದಾರೆ.
ರಾಜ್ಯಗಳು ಬೆಳವಣಿಗೆಯಾದರೆ ದೇಶವೂ ಬೆಳವಣಿಗೆಯಾಗುತ್ತದೆ. ಆದ್ದರಿಂದ ತಮ್ಮ ನೇತೃತ್ವದ ಎನ್.ಡಿ.ಎ ಸರ್ಕಾರ ರಾಜ್ಯಗಳ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.
ಕಳೆದ ಹತ್ತು ತಿಂಗಳ ಹಿಂದೆ ಅಭಿವೃದ್ಧಿಗೆ ತಡೆಯಾಗಿದ್ದ ವಿನಾಶಕಾರಿ ಮೋಡಗಳು ಮರೆಯಾಗಿವೆ. ಇಡಿ ವಿಶ್ವದ ಗಮನ ಭಾರತದ ಮೇಲಿದೆ. ಒರಿಸ್ಸಾದ ರೂರ್ಕೆಲಾ ಮಿನಿ ಭಾರತವಿದ್ದಂತೆ, ರೂರ್ಕೆಲಾದಲ್ಲಿ ಏನಾದರೂ ನಡೆದರೆ ಅದು ಭಾರತದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಸಹಕರಿಸುವುದಾಗಿ ಮೋದಿ ಹೇಳಿದ್ದಾರೆ.