ಬೆಂಗಳೂರು : 'ರಸ್ತೆ ಅಭಿವೃದ್ಧಿ' ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತರ ರಾಜ್ಯಗಳಿಗಿಂತಲೂ ಸುಮಾರು ನಾಲ್ಕು ಪಟ್ಟು ಹೆಚ್ಚು ಯೋಜನೆಗಳನ್ನು ಕರ್ನಾಟಕಕ್ಕೆ ಮಂಜೂರು ಮಾಡಿಕೊಟ್ಟಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಮಾ.31ರಂದು ಬೆಂಗಳೂರಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1900 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲಾಗುವುದು ಎಂದಿದ್ದಾರೆ.
ಸುಮಾರು 10 ಸಾವಿರ ಕೋಟಿ ರೂ. ಮೌಲ್ಯದ ಈ ಯೋಜನೆಗಳಿಗೆ ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ. ಯಾವ ಯೋಜನೆಗಳನ್ನೂ ಕೇಂದ್ರ ಸರ್ಕಾರ ಕೈಬಿಡುವುದಿಲ್ಲ. ಕರ್ನಾಟಕಕ್ಕೇ ಇತರ ರಾಜ್ಯಗಳಿಗಿಂತಲೂ ಹೆಚ್ಚು ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಹಿಂದಿನ ಸರ್ಕಾರ ಹೊಸಪೇಟೆ, ಚಿತ್ರದುರ್ಗ ನಡುವಿನ 520 ಕಿ.ಮೀ. ಉದ್ದದ ಹೆದ್ದಾರಿಯನ್ನು 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮತಿ ನೀಡಿದೆ ಎಂದು ಹೇಳಿದ್ದಾರೆ.
ಬಳ್ಳಾರಿ, 95 ಕಿ.ಮೀ. 910 ಕೋಟಿ, ಹಾಸನ-ಬಿ.ಸಿ.ರಸ್ತೆ 133 ಕಿ.ಮೀ. 1500 ಕೋಟಿ, ಶಿವಮೊಗ್ಗ-ಮಂಗಳೂರು 190 ಕಿ.ಮೀ. 2300 ಕೋಟಿ, ಹುಬ್ಬಳ್ಳಿ-ಅಂಕೋಲಾ 130 ಕಿ.ಮೀ. 578 ಕೋಟಿ, ಹುಬ್ಬಳ್ಳಿ-ಹೊಸಪೇಟೆ 141 ಕಿ,ಮೀ. 1300 ಕೋಟಿ, ವಿಜಯಪುರ-ಗುಲ್ಬರ್ಗಾ-ಹುಮ್ನಾಬಾದ್ 250 ಕಿ.ಮೀ. 578 ಕೋಟಿ, ಬೆಂಗಳೂರಿನಿಂದ ತಮಿಳುನಾಡು ಸಂಪರ್ಕಿಸುವ ದಿಂಡಿಘಾಟ್ 204 ಕಿ.ಮೀ. 720 ಕೋಟಿ ಹಾಗೂ ನೆಲಮಂಗಲ, ತುಮಕೂರು, ಚಿತ್ರದುರ್ಗದಿಂದ ಹಾವೇರಿಯನ್ನು ಸಂಪರ್ಕಿಸುವ ಹೆದ್ದಾರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.
ಯೋಜನೆಗಳಿಗಾಗಿ ಈಗಾಗಲೇ 1070 ಕೋಟಿ ಬಿಡುಗಡೆ ಮಾಡಲಾಗಿದೆ ಎಂದ ಕೇಂದ್ರ ಸಚಿವರು ಒಂದು ತಿಂಗಳೊಳಗಾಗಿ ಮೈಸೂರು-ಬೆಂಗಳೂರು ರಸ್ತೆ ಅಭಿವೃದ್ಧಿ ಯೋಜನೆಗೆ ಅನುಮತಿ ಕೊಡುವ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.