ನವದೆಹಲಿ : ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಹಿರಿಯ ನಾಯಕರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ವಿರುದ್ಧ ಆಮ್ ಆದ್ಮಿ ಪಕ್ಷ ಕ್ರಮ ಕೈಗೊಂಡಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹಿನ್ನಲೆಯಲ್ಲಿ ಇಬ್ಬರು ನಾಯಕರನ್ನು ಆಪ್ ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ.
ದೆಹಲಿಯ ಪಕ್ಷದ ಕಛೇರಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಲು ಕೆಲ ಸದಸ್ಯರಿಗೆ ನಿರಾಕರಿಸಲಾಯಿತು. ಈ ವೇಳೆ ಯೋಗೇಂದ್ರ ಯಾದವ್, ಆಪ್ ಕಛೇರಿಯ ಹೊರಗೆ ಕುಳಿತು ಧರಣಿ ನಡೆಸಿದರು. ಯಾದವ್ ಗೆ ಇನ್ನು ಕೆಲ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.
ಪಕ್ಷದ ಕೆಲ ನಾಯಕರ ಹೈಡ್ರಾಮಾದ ನಡುವೆಯೇ ಪಕ್ಷದ ಕಛೇರಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಪ್ರಶಾಂತ್ ಭೂಷಣ್ ಭಾಗವಹಿಸಿದ್ದರು. ಈ ವೇಳೆ ಕೇಜ್ರಿವಾಲ್ ಪರ ಘೋಷಣೆಗಳನ್ನು ಕೂಗಿದ ಆಪ್ ನಾಯಕರು ಭೂಷಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾದವ್ ಹಾಗೂ ಭೂಷಣ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂಬ ಒತ್ತಾಯಗಳು ಕೇಳಿಬಂದವು. ಅಂತಿಮವಾಗಿ ಆಪ್ ಉನ್ನತ ಸಮಿತಿಯಿಂದ್ ಕೊಕ್ ನೀಡಲಾಗಿದೆ.