ನವದೆಹಲಿ : ಭೂಸ್ವಾಧೀನ ಸುಗ್ರೀವಾಜ್ಞೆಯ ಮರುಜಾರಿಗೆ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಈಗಾಗಲೇ ಹೊರಡಿಸಿರುವ ಸುಗ್ರೀವಾಜ್ಞೆ ಅವಧಿ ಏ.5ರಂದು ಅಂತ್ಯಗೊಳ್ಳಲಿದೆ. ಹೀಗಾಗಿ ಮರುಜಾರಿಗೆ ಕೇಂದ್ರ ಸಂಪುಟ ನಿರ್ಧರಿಸಿದೆ.
ಈ ನಡುವೆ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ. ಇದು ರೈತ ವಿರೋಧಿ ಸುಗ್ರೀವಾಜ್ಞೆಯಾಗಿದೆ ಎಂದು ಸಚಿವ ನಿತಿನ್ ಗಡ್ಕರಿಯವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ದೇಶದ ರಾಜಕೀಯದಲ್ಲಿ ಮತ್ತು ರೈತ ವಲಯದಲ್ಲಿ ವಿವಾದದ ಕಿಡಿ ಹೊತ್ತಿಸಿರುವ ಭೂಸ್ವಾಧೀನ ಸುಗ್ರೀವಾಜ್ಞೆಯ ಮರುಜಾರಿಗೆ ಕೇಂದ್ರ ಸಚಿವ ಸಂಪುಟ ಸಭೆ ಶುಕ್ರವಾರ ಸಂಜೆ ನಿರ್ಧರಿಸಿದೆ. ಅಲ್ಲದೆ, ರಾಜ್ಯಸಭೆಯನ್ನು ಮುಂದೂಡಲೂ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೇಂದ್ರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ಸಂಸದೀಯ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ಸಭೆಯಲ್ಲಿ ಸಚಿವರಾದ ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್, ಮುಖ್ತಾರ್ ಅಬ್ಟಾಸ್ ನಖ್ವಿ ಹಾಜರಿದ್ದರು. ಅರುಣ್ ಜೇಟ್ಲಿ ಗೈರು ಹಾಜರಾಗಿದ್ದರೂ ಸಭೆಯ ನಿರ್ಣಯಕ್ಕೆ ಸಮ್ಮತಿ ತಿಳಿಸಿದ್ದರು.
ಏಪ್ರಿಲ್ 5ರಂದು ಸುಗ್ರೀವಾಜ್ಞೆ ಅವಧಿ ಅಂತ್ಯಗೊಳ್ಳಲಿದೆ. ಆದರೆ ಲೋಕಸಭೆಯಲ್ಲಿ ಮಾತ್ರ ಪಾಸಾಗಿರುವ ಈ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗೇ ಇಲ್ಲ. ಹೀಗಾಗಿ ಸುಗ್ರೀವಾಜ್ಞೆ ಜೀವಂತವಾಗಿರಬೇಕು ಎಂದರೆ ಇದರ ಮರುಜಾರಿಗೆ ಏಪ್ರಿಲ್ 5ರೊಳಗೆ ಹೊಸ ಆದೇಶ ನೀಡಬೇಕಿದೆ.
ಆದರೆ ಯಾವತ್ತು ಹೊಸ ಸುಗ್ರೀವಾಜ್ಞೆ ಆದೇಶ ಹೊರಬೀಳಲಿದೆ ಎಂಬುದನ್ನು ಹೇಳಲು ನಿರಾಕರಿಸಿದ ವೆಂಕಯ್ಯ ನಾಯ್ಡು, "ಹೊರಡಿಸಿದಾಗ ನಿಮಗೇ ಗೊತ್ತಾಗುತ್ತದೆ' ಎಂದರು. ಹೊಸ ಅಧ್ಯಾದೇಶದಲ್ಲಿ ಇತ್ತೀಚೆಗೆ ಲೋಕಸಭೆಯಲ್ಲಿ ಅಂಗೀಕರಿಸಲಾದ 9 ತಿದ್ದುಪಡಿಗಳೂ ಅಡಕವಾಗಿರುತ್ತವೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಸುಗ್ರೀವಾಜ್ಞೆ ರೈತ ವಿರೋಧಿ ಎನ್ನುವ ರಾಜಕೀಯ ಪಕ್ಷಗಳು, ರೈತರ ಜತೆ ಇನ್ನಷ್ಟು ಸಂಧಾನ ಮಾತುಕತೆ ನಡೆಸಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.