ಬೆಂಗಳೂರು : ದೇಶದ ಒಕ್ಕೂಟ ವ್ಯವಸ್ಥೆಯಿಂದ ಹೊರಬಂದರೂ ಸರಿಯೇ, ತಮಿಳುನಾಡಿನ ವಿರೋಧವನ್ನು ಲೆಕ್ಕಿಸದೆ ತಕ್ಷಣವೇ 2000 ಕೋಟಿ ರೂ. ಸಾಲ ಮಾಡಿ ಮೇಕೆದಾಟು ನೀರಾವರಿ ಯೋಜನೆ ಜಾರಿಗೊಳಿಸುವ ಮೂಲಕ ಬಾಯಾರಿಕೆಯಿಂದ ತತ್ತರಿಸಿರುವ ಜನರಿಗೆ ನೀರು ಕೊಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವುದರ ವಿರುದ್ಧ ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದಂತೆ ನಮ್ಮ ವಿಧಾನಸಭೆಯೂ ನಿರ್ಣಯ ಕೈಗೊಳ್ಳಬೇಕು. ಯಾವ ಕಾರಣಕ್ಕೂ ಯೋಜನೆಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ರಾಜ್ಯದ ಹಲವು ಯೋಜನೆಗಳನ್ನು ಪಕ್ಕಕ್ಕಿಟ್ಟು ತಕ್ಷಣವೇ ಕುಡಿಯುವ ನೀರಿಗೆ ತತ್ತರಿಸುತ್ತಿರುವ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಒಂದೆರಡು ವರ್ಷಗಳಲ್ಲಿ ನೀರು ಕೊಡಿ ಎಂದು ಆಗ್ರಹಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗಕ್ಕೆ ಮಾತ್ರ ನೀರು ಕೊಡಬಹುದು. ಆದರೆ ಈ ಭಾಗದ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತತ್ತರಿಸುತ್ತಿರುವ ಜನರಿಗೆ ನೀರು ಕೊಡಲು ಮೇಕೆದಾಟು ಯೋಜನೆ ಜಾರಿಗೆ ತರಲೇಬೇಕು ಎಂದು ಒತ್ತಾಯಿಸಿದರು. ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳು ತಮಗಿಚ್ಛೆ ಬಂದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುತ್ತವೆ. ಆಂಧ್ರ ಪ್ರದೇಶ ತನ್ನ ಪಾಲಿನ ನೀರನ್ನು ಕೃಷ್ಣಾ ನದಿಯಿಂದ ಪಡೆಯಲು ಮಡಕಶಿರಾದಿಂದ ಪಾವಗಡದ ಮೇಲೆ ಪೈಪ್ ಲೈನ್ ಹಾಕುತ್ತದೆ. ನದಿ ನೀರಿನಲ್ಲಿ ನಾವು ಚೆನ್ನೈಗೆ ಕುಡಿಯುವ ನೀರಿಗಾಗಿ ನಮ್ಮ ಪಾಲಿನ ಐದು ಟಿಎಂಸಿ ನೀರನ್ನು ಬಿಟ್ಟುಕೊಡುತ್ತೇವೆ. ಆದರೆ ತಮಿಳುನಾಡು ಅಸೆಂಬ್ಲಿಯಲ್ಲಿ ಒಂದು ನಿರ್ಣಯ ಪಾಸು ಮಾಡಿ, ಯೋಜನೆ ಜಾರಿ ಮಾಡಲು ಬಿಡುವುದಿಲ್ಲ ಎನ್ನುತ್ತದೆ. ಇದೇ ತಮಿಳುನಾಡು ನಮ್ಮ ವಿರೋಧವನ್ನೂ ಲೆಕ್ಕಿಸದೆ ಹೊಗೇನಕಲ್ ನಿಂದ ಧರ್ಮಪುರಿ, ಕೃಷ್ಣಗಿರಿಗೆ ಕುಡಿಯುವ ನೀರು ತೆಗೆದುಕೊಂಡು ಹೋಯಿತು ಎಂದರು.
ಈಗ ಅವರ ಪಾಲಿನ 192 ಟಿಎಂಸಿ ನೀರು ಬಿಡುಗಡೆ ಮಾಡುತ್ತೇವೆ ಎಂದ ಮೇಲೂ ಅವರ ವಿರೋಧವೇಕೆ? ಉಭಯ ರಾಜ್ಯಗಳ ಮಧ್ಯೆ ಸಿಲುಕಿ ನಾವು ಕಷ್ಟಕ್ಕೆ ಸಿಲುಕುವುದಾದರೆ, ಕುಡಿಯುವ ನೀರಿಗೂ ಪರದಾಡುವಂತಾದರೆ ದೇಶದ ಒಕ್ಕೂಟ ವ್ಯವಸ್ಥೆಯಿಂದ ಹೊರಬಂದರೂ ಮುಲಾಜೇ ನೋಡುವುದು ಬೇಡ. ಮೊದಲು ನಮ್ಮ ಜನರ ಬಾಯಾರಿಕೆಯನ್ನು ತಣಿಸೋಣ ಎಂದು ನುಡಿದರು. ನೀವು ಪ್ರತಿವರ್ಷ ಎಂಟು ಸಾವಿರ ಕೋಟಿ ರೂ., ಹತ್ತು ಸಾವಿರ ಕೋಟಿ ರೂ. ಎಂದು ಕೊಡುತ್ತಾ ಹೋದರೆ ಹತ್ತು ವರ್ಷ ಕಳೆದರೂ ನಮ್ಮ ನೀರಾವರಿ ಯೋಜನೆಗಳು ಪೂರ್ಣಗೊಳ್ಳುವುದಿಲ್ಲ. ಈಗಾಗಲೇ ಹೊರಗಡೆಯಿಂದ ಇಪ್ಪತ್ತು ಸಾವಿರ ಕೋಟಿ ರೂ ಸಾಲ ಪಡೆದಿದ್ದೀರಿ. ಬೇಕಿದ್ದರೆ ಇದಕ್ಕಾಗಿ ಮತ್ತೂ ಎರಡು ಸಾವಿರ ಕೋಟಿ ರೂ ಸಾಲ ಪಡೆಯಿರಿ.ಮೊದಲು ನೀರು ಕೊಡುವ ಕೆಲಸ ಮಾಡಿ ಎಂದು ಅವರು ಒತ್ತಾಯಿಸಿದರು.
ನೇತ್ರಾವತಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮಠಾಧಿಪತಿಗಳನ್ನು ಕರೆಸಿ ಮಾತನಾಡಿ. ರೀತಿ ಆಲಮಟ್ಟಿ ಆಣೆಕಟ್ಟೆಯ ಮೇಲ್ಬಾಗದಲ್ಲಿ ಪ್ರವಾಹ ಶುರುವಾದಾಗ ಆಂಧ್ರಕ್ಕೆ ಹರಿದು ಹೋಗುವ ನೀರನ್ನು ನಮ್ಮ ಕೆರೆಗಳಿಗೆ ಹರಿಸಿ. ಇವೆಲ್ಲದರ ನಡುವೆ ತುರ್ತಾಗಿ ಬಾಯಾರಿಕೆಯಿಂದ ನರಳಿರುವ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಸೇರಿದಂತೆ ಎಲ್ಲ ಜಿಲ್ಲೆಗಳಿಗೆ ಮೇಕೆದಾಟು ಯೋಜನೆಯಿಂದ ನೀರು ಕೊಡಲು ತುರ್ತು ಆದ್ಯತೆ ನೀಡಿ ಎಂದರು.