ಬೆಂಗಳೂರು : ಕರ್ನಾಟಕದಲ್ಲಿ ಎಂದಿನಂತೆ ನೈಋತ್ಯ ಮುಂಗಾರು ಇದೆ ಎಂಬ ಸಾಮಾನ್ಯ ಗ್ರಹಿಕೆಯನ್ನು ಅಲ್ಲಗಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ವಾಸ್ತವ ಚಿತ್ರಣವನ್ನು ಪರಿಚಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಸಕ್ತ ಸಾಲಿನ ಜೂನ್ 1 ರಿಂದ ಆಗಸ್ಟ್ 15 ರ ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ನೈಋತ್ಯ ಮುಂಗಾರಿನ ಶೇಕಡಾ 10 ರಷ್ಟು ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾವೇರಿ ಕಣಿವೆ ಅಚ್ಚುಕಟ್ಟು ಪ್ರದೇಶದಲ್ಲಿ ಹಾಗೂ ಜಲ ವಿದ್ಯುತ್ ಉತ್ಪಾದನಾ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಮಳೆಯ ಪ್ರಮಾಣದ ಕೊರತೆ ತೀವ್ರ ಗಂಭೀರವಾಗಿದೆ. ಕೃಷ್ಣಾ ಕಣಿವೆ ಪ್ರದೇಶದಲ್ಲೂ ಸಂಗ್ರಹಣಾ ಸಾಮಥ್ರ್ಯದಲ್ಲಿ ತೀವ್ರ ಕೊರತೆ ಎದುರಾಗಿದೆ ಎಂದಿದ್ದಾರೆ.
ಕಾವೇರಿ ಹಾಗೂ ಕೃಷ್ಣಾ ಕಣಿವೆ ಅಚ್ಚುಕಟ್ಟು ಪ್ರದೇಶದಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಮುಂಗಾರು ಮುನ್ಸೂಚನೆಯೂ ಆಶಾದಾಯಕವಾಗಿಲ್ಲ. ರಾಜ್ಯದ ಜಲ ವಿದ್ಯುತ್ ಉತ್ಪಾದನಾ ಪ್ರದೇಶದ ಪ್ರಮುಖ ಜಲಾಶಯಗಳ ಸಂಗ್ರಹಣಾ ಸಾಮಥ್ರ್ಯ ಒಟ್ಟಾರೆ ಶೇಕಡಾ 46 ರಿಂದ 48 ರಷ್ಟಿದೆ. ಜಲಾಶಯಗಳಲ್ಲಿನ ಅಲ್ಪ ಪ್ರಮಾಣದ ನೀರಿನ ಮಟ್ಟ ಅಚ್ಚಕಟ್ಟು ಪ್ರದೇಶದ ಸಾಗುವಳಿಯ ಮೇಲೂ ಪರಿಣಾಮ ಬೀರಿದೆ. ರಾಜ್ಯದಲ್ಲಿ ಏಳು ಹೆಕ್ಟೇರ್ ಗುರಿಗೆ ಪ್ರತಿಯಾಗಿ 2.42 ಹೆಕ್ಟೇರ್ ಅಂದರೆ ಶೇಕಡಾ 35 ರಷ್ಟು ಭತ್ತದ ಬಿತ್ತನೆ ಕ್ಷೇತ್ರ ಕಡಿಮೆಯಾಗಿದೆ. ಈ ಋತುಮಾನದಲ್ಲಿ ಭತ್ತದ ಬಿತ್ತನೆ ಪ್ರದೇಶ ವೃದ್ಧಿಸುವ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಪ್ರಮಾಣದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರು ಪೂರೈಕೆಯ ಮೇಲೂ ಪ್ರಭಾವ ಬೀರಲಿದೆ. ನಮ್ಮ ಸರ್ಕಾರವು ಪರಿಸ್ಥಿತಿಯ ಮೇಲೆ ಅತ್ಯಂತ ಸೂಕ್ಷ್ಮ ನಿಗಾ ಇರಿಸಿದೆ.
ಅಲ್ಲದೆ, ಪ್ರಸ್ತುತ ಲಭ್ಯವಿರುವ ನೀರನ್ನು ಕುಡಿಯುವ ನೀರು ಉದ್ದೇಶಕ್ಕಾಗಿ ಮಾತ್ರ ಬಳಸಲು ಹಾಗೂ ವಿರಳಾತಿ ವಿರಳ ಪ್ರಕರಣಗಳನ್ನು ಹೊರತುಪಡಿಸಿ, ನೀರಾವರಿಗಾಗಿ ನೀರು ಬಿಡುಗಡೆ ಮಾಡದಿರಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ನರೇಗಾ)ಯಡಿ ಉದ್ಯೋಗ ಸೃಜನಾ ಕಾಮಗಾರಿಗಳನ್ನು ಮತ್ತಷ್ಟು ಬಲಪಡಿಸಲು ಯೋಜಿಸಲಾಗಿದೆ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಮುಖ್ಯಮಂತ್ರಿ ವಿವರಿಸಿದ್ದಾರೆ.