ಶ್ರೀನಗರ : ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ಶಾಸಕರು ಒಬ್ಬರುಗೊಬ್ಬರು ಹೊಡೆದಾಡಿಕೊಂಡು, ನೂಕುನುಗ್ಗಾಟ ನಡೆಸಿ ಕೋಲಾಹಲ ನಡೆಸಿದ ಘಟನೆ ನಡೆದಿದೆ.
ವಿಧಾನಸಭಾ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಒಬ್ಬರನ್ನೊಬ್ಬರು ತಳ್ಳಿದಾಗ ಕೋಲಾಹಲ ಏರ್ಪಟ್ಟಿತ್ತು. ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು.
ಆಡಳಿತಾರೂಢ ಸರ್ಕಾರ ಸುಳ್ಳು ಭರವಸೆಗಳನ್ನು ಜನತೆಗೆ ನೀಡಿದೆ. ಅಲ್ಲದೇ ಪಿಡಿಪಿ- ಬಿಜೆಪಿ ಮೈತ್ರಿಕೂಟ ಸರ್ಕಾರದ ಇತ್ತೀಚೆಗಿನ ವಿವಾದವನ್ನು ಅಸ್ತ್ರವನ್ನಾಗಿಸಿಕೊಂಡು ವಿಪಕ್ಷಗಳು ವಾಗ್ದಾಳಿ ನಡೆಸಿದವು. ಈ ಸಂದರ್ಭದಲ್ಲಿ ಶಾಸಕರು ಒಬ್ಬರನ್ನೊಬ್ಬರು ಥಳಿಸಿ, ಗದ್ದಲ ನಡೆಸುವ ಮೂಲಕ ಕಲಾಪ ರಣರಂಗವಾಯಿತು.
ಸದನದೊಳಗಿದ್ದ ಬೆಂಚುಗಳನ್ನು ಉರುಳಿಸಿ, ಶಾಸಕರೊಬ್ಬರಿಗೆ ತಲೆಗೆ ಏಟಾಗಿದೆ. ಶಾಸಕರ ಕಿತ್ತಾಟದ ಪರಿಸ್ಥಿತಿ ಹತೋಟಿಗೆ ತರಲು ಮಾರ್ಷಲ್ಸ್ ಗಳು ಹರಸಾಹಸಪಡುತ್ತಿದ್ದರು.
ವಿದ್ಯಾರ್ಥಿಗಳ ಎದುರೇ ಅಸೆಂಬ್ಲಿಯಲ್ಲಿ ಈ ರೀತಿ ನಡೆದುಕೊಂಡಿರುವುದು ತುಂಬಾ ದುರದೃಷ್ಟಕರ ಎಂದು ಪೀಪಲ್ಸ್ ಡೆಮೋಕ್ರಟಿಕ್ ಪಾರ್ಟಿಯ ಮುಖಂಡ ನಯೀಮ್ ಅಖ್ತರ್ ತಿಳಿಸಿದ್ದಾರೆ.