ನವದೆಹಲಿ : ಕರ್ನಾಟಕ ರಾಜ್ಯಪಾಲ ಹುದ್ದೆಯಿಂದ ನಿವೃತ್ತರಾದ ಬಳಿಕ ಮೌನಕ್ಕೆ ಶರಣಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ದಿಢೀರನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ನಾಯಕ ಪಿ.ಚಿದಂಬರಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2ಜಿ ಸ್ಪೆಕ್ಟ್ರಂ ಹಂಚಿಕೆ ಪ್ರಕರಣದ ವಿಚಾರದಲ್ಲಿ ತಮ್ಮ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಸೋನಿಯಾ ಸುತ್ತಲಿದ್ದ ನಾಯಕರು ನನ್ನನ್ನು ಸಚಿವ ಸ್ಥಾನದಿಂದ ಕಿತ್ತೂಗೆದರು. ಸೋನಿಯಾ ಅವರು ನನ್ನನ್ನು ಕಾಂಗ್ರೆಸ್ಸಿನಿಂದಲೇ ದೂರವಿಟ್ಟರು. ಸೋನಿಯಾ ಯಾವುದೇ ಜವಾಬ್ದಾರಿ ಹಂಚಿಕೊಳ್ಳುತ್ತಿಲ್ಲ. ಅವರು ಭ್ರಷ್ಟರ ಕಪಿಮುಷ್ಟಿಯಲ್ಲಿದ್ದಾರೆ ಎಂದು ವಿವಿಧ ಟೀವಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷ ಇಷ್ಟೊಂದು ಕೆಳಕ್ಕೆ ಕುಸಿಯಲು ಅದರ ನಾಯಕರು ಹಗರಣಗಳಲ್ಲಿ ಭಾಗಿಯಾಗಿರುವುದೇ ಕಾರಣ ಎಂದಿರುವ ಅವರು, "ಪಕ್ಷದ ನಾಯಕರು, ಮಾಜಿ ಪ್ರಧಾನಿಗೇ ಸಮನ್ಸ್ ಬರುತ್ತಿವೆ. ಸೋನಿಯಾಗೆ ಗೊತ್ತಿಲ್ಲದೇ ಇವೆಲ್ಲ ನಡೆದವೇ' ಎಂದು ಅವರು ಕಿಡಿಕಾರಿದ್ದಾರೆ. "ಪ್ರಿಯಾಂಕಾ ಗಾಂಧಿ ಅವರನ್ನು ರಾಜಕಾರಣದಿಂದ ದೂರವಿಡುವ ಸಲುವಾಗಿಯೇ ರಾಬರ್ಟ್ ವಾದ್ರಾ ಕುರಿತು ಆರೋಪ ಮಾಡಲಾಗುತ್ತಿದೆ. ಆದಾಗ್ಯೂ ಪ್ರಿಯಾಂಕಾ ಅವರು ಸಕ್ರಿಯ ರಾಜಕಾರಣಕ್ಕೆ ಬರಬೇಕು' ಎಂದು ಸಲಹೆ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಇನ್ನೂ ಯುವಕರಾಗಿದ್ದು, ಅವರು ಎಲ್ಲ ಕಡೆ ಇರಬೇಕು. ಈ ಹಿಂದಿನ ಚುನಾವಣೆ ಸೋಲಿಗೆ ಅವರು ಕಾರಣರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತರ್ಜಾಲದಲ್ಲಿ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು, ಟೀಕಿಸಲು ಅಡ್ಡಿಯಾಗಿದ್ದ, ಸುಪ್ರೀಂಕೋರ್ಟ್ ರದ್ದುಗೊಳಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಸೃಷ್ಟಿಕರ್ತ ಪಿ.ಚಿದಂಬರಂ ಮತ್ತು ಅಂದಿನ ಟೆಲಿಕಾಂ ಸಚಿವ ಎ.ರಾಜಾ ಆಗಿದ್ದಾರೆ ಎಂದು ದೂರಿದ್ದಾರೆ. ವಿಚಿತ್ರವೆಂದರೆ ಇದೇ ಚಿದಂಬರಂ ಅವರು ಇತ್ತೀಚೆಗೆ 66ಎ ಪರಿಚ್ಛೇದವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಕ್ರಮವನ್ನು ಶ್ಲಾಘಿಸಿದ್ದರು.