ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿನ ಬಂಡಾಯ ತಣಿಸಲು ಭಿನ್ನಮತೀಯ ನಾಯಕರಾದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಬಣ ಮತ್ತು ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಬಣದ ಮಧ್ಯೆ ನಡೆದ ಸಂಧಾನ ಮಾತುಕತೆಗಳು ಮುರಿದು ಬಿದ್ದಿವೆ.
ಸಭೆಯ ಬಳಿಕ ಕೇಜ್ರಿವಾಲ್ ಗೆ ಪತ್ರ ಬರೆದಿರುವ ಯಾದವ್ ಮತ್ತು ಭೂಷಣ್ ಅವರು,ಈ ಸಭೆಯನ್ನು ಸಂಧಾನಕ್ಕೆ ಕರೆದಿರಲಿಲ್ಲ. ಬದಲಿಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಗೆ ನಮಗೆ ರಾಜೀನಾಮೆ ನೀಡಬೇಕೆಂದು ಸೂಚಿಸಲು ಕರೆಯಲಾಗಿತ್ತು. ರಾಜೀನಾಮೆ ನೀಡದಿದ್ದರೆ ವಜಾ ಮಾಡುವ ಬೆದರಿಕೆ ಹಾಕಲಾಯಿತು. ನಾವು ನಿಮ್ಮ ರಾಜೀನಾಮೆ ಕೇಳದೇ ಹೋದರೂ ರಾಜೀನಾಮೆ ಕೇಳಿದ್ದಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂಷಿಸಿದ್ದಾರೆ. ಅಲ್ಲದೆ, ತಮ್ಮನ್ನು 10 ದಿನದಿಂದ ಭೇಟಿಯಾಗದೇ ಸತಾಯಿಸುತ್ತಿದ್ದೀರಿ ಎಂದು ಕೇಜ್ರಿವಾಲ್ ರನ್ನು ದೂಷಿಸಲಾಗಿದೆ.
ಆದರೆ ಯಾದವ್, ಭೂಷಣ್ ಆಪಾದನೆ ತಳ್ಳಿಹಾಕಿರುವ ಕೇಜ್ರಿವಾಲ್ ಬಣದ ನಾಯಕ ಆಶುತೋಷ್, "ಪಕ್ಷದ ಸಂಚಾಲಕ ಹುದ್ದಯಿಂದ ಕೇಜ್ರಿವಾಲ್ ಅವರನ್ನು ಕೆಳಕ್ಕಿಳಿಸಬೇಕು ಎಂಬ ಆಗ್ರಹವನ್ನು ಬಿಟ್ಟು ಯಾದವ್ ಮತ್ತು ಭೂಷಣ್ ಇಟ್ಟಿರುವ ಎಲ್ಲ ಬೇಡಿಕೆಗೆ ಪಕ್ಷ ಒಪ್ಪಿದೆ. ಆದರೂ ಉಭಯ ನಾಯಕರು ಗೊಂದಲ ಸೃಷ್ಟಿಸುತ್ತಿದ್ದಾರೆ' ಎಂದಿದ್ದಾರೆ. "ಯಾದವ್ ರದ್ದು ದ್ವಿಮುಖ ನೀತಿ' ಎಂದು ಕುಮಾರ್ ವಿಶ್ವಾಸ್ ಟೀಕಿಸಿದ್ದಾರೆ.