ಬೀದರ್ : 'ಡಿ.ಕೆ ರವಿ' ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಲು ಪಟ್ಟು ಹಿಡಿದಿದ್ದ ವಿರೋಧಪಕ್ಷಗಳ ವಿರುದ್ಧ ಮಾಜಿ ಸಂಸದ ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮಾ.24ರಂದು ಬೀದರ್ ನಲ್ಲಿ ಮಾತನಾಡಿದ ವಿಶ್ವನಾಥ್, ಡಿ.ಕೆ ರವಿ ಪ್ರಕರಣಕ್ಕೆ ವಿರೋಧಪಕ್ಷಗಳು ಜಾತಿಲೇಪನ ನೀಡಿವೆ. ದೇಶದ ರಾಜಕಾರಣ ವಿಷಮತೆಗೆ ಜಾರುತ್ತಿದೆ ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷ ಅಧಿಕಾರಿ ಡಿ.ಕೆ ರವಿ ಪ್ರಕರಣವನ್ನು ಸಿಬಿಐ ಗೆ ನೀಡಬೇಕೆಂದು ಬೊಬ್ಬೆ ಹೊಡೆಯುತ್ತಿರುವ ವಿರೋಧಪಕ್ಷಗಳು ಕೆ.ಪಿ.ಎಸ್.ಸಿ ಯಲ್ಲಿ ನಡೆದಿರುವ ಹಗರಣ ಹಾಗೂ ರಾಘವೇಶ್ವರಭಾರತೀ ಸ್ವಾಮಿಗಳ ವಿರುದ್ಧ ಕೇಳಿಬಂದಿರುವ ಆರೋಪದ ಪ್ರಕರಣಗಳನ್ನೂ ಸಿಬಿಐಗೆ ವಹಿಸಬೇಕೆಂದು ಏಕೆ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಡಿ.ಕೆ ರವಿ ಪ್ರಕರಣವನ್ನೇ ಮುಂದಿಟ್ಟುಕೊಂಡು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ವಿಫಲವಾಗಿದೆ. ರವಿ ಪ್ರಕರಣವನ್ನು ಸಿಬಿಐಗೆ ವಹಿಸಲು ಪ್ರತಿಭಟನೆ ನಡೆಸಿದಂತೆ ಉಳಿದ ಪ್ರಕರಣಗಳನ್ನೂ ಸಿಬಿಐಗೆ ವಹಿಸಲು ಪ್ರತಿಭಟನೆ ನಡೆಸಲಿ ಎಂದು ವಿಶ್ವನಾಥ್ ಸವಾಲು ಹಾಕಿದ್ದಾರೆ.