ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಆಫ್ಸ್ಪಾ) ಹಿಂತೆಗೆತಕ್ಕೆ ಮಿತ್ರಪಕ್ಷ ಬಿಜೆಪಿಯ ಪ್ರಬಲ ವಿರೋಧವಿದ್ದರೂ, ಹಂತಹಂತವಾಗಿ ಆಫ್ಸ್ಪಾ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಹೇಳಿಕೆ ನೀಡಿದ್ದಾರೆ. ಇದರಿಂದ ಪಿಡಿಪಿ ಹಾಗೂ ಬಿಜೆಪಿ ನಡುವೆ ಕಾಶ್ಮೀರದಲ್ಲಿ ಮತ್ತೂಂದು ಸುತ್ತಿನ ತಿಕ್ಕಾಟ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಭದ್ರತಾ ಪರಿಸ್ಥಿತಿ ಸುಧಾರಣೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು, ಭಯೋತ್ಪಾದನೆ ಮುಕ್ತವಾಗಿರುವ ಪ್ರದೇಶಗಳನ್ನು ಗಲಭೆಪೀಡಿತ ಪ್ರದೇಶಗಳ ಪಟ್ಟಿಯಿಂದ ಹೊರಗಿಡುವ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ. ಆದರೆ ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಸೇನೆ ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಮುಫ್ತಿ ಹೇಳಿದ್ದಾರೆ.
ಇದೇ ವೇಳೆ, ಕಾಶ್ಮೀರದಲ್ಲಿ ಯಾವುದೇ ತೊಂದರೆ ಇಲ್ಲದೆ ಚುನಾವಣೆ ನಡೆದಿದ್ದಕ್ಕೆ ಪಾಕಿಸ್ತಾನ, ಉಗ್ರಗಾಮಿ ಸಂಘಟನೆಗಳು ಹಾಗೂ ಹುರಿಯತ್ ಕಾರಣ ಎಂದು ಅಧಿಕಾರ ಸ್ವೀಕರಿಸಿದ ಮರುದಿನವೇ ಹೇಳಿದ್ದ ಮುಫ್ತಿ ಈಗ ಉಲ್ಟಾ ಹೊಡೆದಿದ್ದಾರೆ. ಮುಕ್ತ ಚುನಾವಣೆ ನಡೆದಿದ್ದಕ್ಕೆ ಚುನಾವಣಾ ಆಯೋಗ ಹಾಗೂ ರಾಜ್ಯದ ಜನರೇ ಕಾರಣ ಎಂದು ಹೇಳಿದ್ದಾರೆ.
ಗಡಿ ರೇಖೆ ಬಳಿ ನುಸುಳುಕೋರ ಚಟವಟಿಕೆಗಳನ್ನು ನಿಲ್ಲಿಸಬೇಕೆಂದು ಪಾಕಿಸ್ತಾನಕ್ಕೆ ಸಂದೇಶ ರವಾನಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಫ್ತಿ ಮನವಿ ಮಾಡಿದ್ದಾರೆ.