ಶ್ರೀನಗರ : ನಿಮ್ಮನ್ನು ನೀವು ತಿದ್ದಿಕೊಳ್ಳಿ, ಇಲ್ಲದಿದ್ದರೆ ನಾವು ಮೈತ್ರಿ ಸರಕಾರವನ್ನು ಕೊನೆಗೊಳಿಸುತ್ತೇವೆ ಎಂಬ ಖಡಕ್ ಸಂದೇಶವನ್ನು ಬಿಜೆಪಿಯು ಜಮ್ಮು-ಕಾಶ್ಮೀರ ಸರಕಾರದಲ್ಲಿನ ತನ್ನ ಮಿತ್ರ ಪಕ್ಷ ಪಿಡಿಪಿಗೆ ರವಾನಿಸಿದೆ.
ಪ್ರತ್ಯೇಕತಾವಾದಿ ಮಸರತ್ ಆಲಂ ಬಿಡುಗಡೆಗೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಿವಾದ, ಟೀಕೆ, ಖಂಡನೆ ಇತ್ಯಾದಿಗಳಿಂದ ಮುಜುಗರಕ್ಕೊಳಗಾಗಿರುವ ಬಿಜೆಪಿಗೆ, ತನ್ನ ಮಿತ್ರಪಕ್ಷವಾದ ಪಿಡಿಪಿಗೆ ಖಡಕ್ ಸಂದೇಶ ರವಾನಿಸದೆ. ಮೈತ್ರಿ ಕೂಟದ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಲಕ್ಷ್ಮಣ ರೇಖೆಯನ್ನು ಎಂದೂ ದಾಟದಿರಿ ಎಂಬ ಮಾತನ್ನೂ ಪಿಡಿಪಿಗೆ ಸ್ಪಷ್ಟವಾಗಿ ಹೇಳಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಜಮ್ಮು-ಕಾಶ್ಮೀರದಲ್ಲಿನ ಪಕ್ಷದ ನಾಯಕ ಹಾಗೂ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರಿಗೆ ಪಕ್ಷದ ಖಡಕ್ ಸಂದೇಶವನ್ನು ರವಾನಿಸುವಂತೆ ಕೇಳಿಕೊಂಡಿದ್ದರೆಂದು ತಿಳಿದುಬಂದಿದೆ.
ಬಿಜೆಪಿ ಹಾಗೂ ಪಿಡಿಪಿ ಹಲವು ದಿನಗಳ ಕಾಲ ಜತೆಯಾಗಿ ಕುಳಿತು ಪರಸ್ಪರ ಚರ್ಚಿಸಿ ರೂಪಿಸಿರುವ ಸಮಾನ ಕನಿಷ್ಠ ಕಾರ್ಯಕ್ರಮಗಳಿಂದ ಒಂದಿನಿತೂ ದೂರ ಸರಿಯದೆ ಅದಕ್ಕೆ ಬದ್ಧವಾಗಿ ಕೆಲಸ ಮಾಡುವುದಲ್ಲದೇ ಅನ್ಯತಃ ಬೇರೇನನ್ನೂ ಮಾಡಕೂಡದೆಂಬ ಸಂದೇಶವನ್ನು ಬಿಜೆಪಿಯ ಕೇಂದ್ರ ನಾಯಕತ್ವವು ಪಿಡಿಪಿಗೆ ಹೇಳಿದೆ.
ಪ್ರತ್ಯೇಕತಾವಾದಿ ಮಸರತ್ ಆಲಂ ಬಿಡುಗಡೆ ವಿಚಾರವಾಗಿ ತನ್ನೊಂದಿಗೆ ಯಾವುದೇ ರೀತಿಯ ಸಮಾಲೋಚನೆ ನಡೆಸದೆ ಪಿಡಿಪಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದ ಬಗ್ಗೆ ಬಿಜೆಪಿಯು ತೀವ್ರ ಆಕ್ರೋಶ, ಅಸಮಾಧಾನವನ್ನು ವ್ಯಕ್ತಪಡಿಸಿರುವುದಾಗಿ ವರದಿಗಳು ತಿಳಿಸಿವೆ.