ಲಂಡನ್ : ಸುಮಾರು 67 ವರ್ಷಗಳಷ್ಟು ಹಳೆಯದಾದ, ನಿಜಾಮರ ಹಣ ವರ್ಗಾವಣೆಗೆ ಸಂಬಂಧ ಪಟ್ಟ ಹಾಗೂ ಇಡಿಯ ವಿಶ್ವದ ಗಮನವನ್ನು ಸೆಳೆದ ’ಹೈದರಾಬಾದ್ ನಿಧಿ ಪ್ರಕರಣ'ದ ಕಾನೂನು ಹೋರಾಟದಲ್ಲಿ ಪ್ರತಿವಾದಿಯಾಗಿರುವ ಭಾರತಕ್ಕೆ 1.50 ಲಕ್ಷ ಪೌಂಡ್ ಕಾನೂನು ಶುಲ್ಕವನ್ನು ಪಾವತಿಸುವಂತೆ ಲಂಡನ್ ನ್ಯಾಯಾಲಯ ಪಾಕಿಸ್ಥಾನಕ್ಕೆ ಆದೇಶಿಸಿದೆ.
ಮಾತ್ರವಲ್ಲ ಈ ಪ್ರಕರಣದಲ್ಲಿ ಪಾಕಿಸ್ಥಾನವು ತೋರಿರುವ ವರ್ತನೆ ಅನುಚಿತವಾದುದೆಂದು ಹೇಳಿದೆ. ಬ್ರಿಟನ್ ನ್ಯಾಯಾಲಯದ ಈ ಆದೇಶವು ಪಾಕ್ ಸರಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒದಗಿರುವ ದೊಡ್ಡ ಹಿನ್ನಡೆ ಎಂದು ತಿಳಿಯಲಾಗಿದೆ.
ಈ ಪ್ರಕರಣದಲ್ಲಿ ಪಾಕಿಸ್ಥಾನಕ್ಕೆ ಸಾರ್ವಭೌಮತೆಯ ರಕ್ಷಣೆ ಸಿಗುವಂತಿಲ್ಲ ಎಂದು ಹೇಳಿರುವ ನ್ಯಾಯಾಧೀಶರು, ಹೈದರಾಬಾದ್ ನಿಧಿ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಭಾರತವು ಭರಿಸಿರುವ ಕಾನೂನು ವೆಚ್ಚವಾಗಿ 1.50 ಲಕ್ಷ ಪೌಂಡ್ಗಳನ್ನು ಪಾವತಿಸುವಂತೆ ನ್ಯಾಯಾಧೀಶರು ಲಂಡನ್ನಲ್ಲಿರುವ ಪಾಕ್ ಹೈಕಮಿಶನರ್ಗೆ ಆದೇಶಿಸಿದರು. 67 ವರ್ಷಗಳ ಹಿಂದಿನ ಹೈದರಾಬಾದ್ ನಿಧಿ ಪ್ರಕರಣದ ಹಣದ ಮೌಲ್ಯವು ಇಂದು 3.50 ಕೋಟಿ ಪೌಂಡ್ಗಳಾಷ್ಟಿಗಿದೆ.
ಹೈದರಾಬಾದ್ ನಿಧಿ ಪ್ರಕರಣದಲ್ಲಿ ಭಾರತ ಸರಕಾರ, ನ್ಯಾಶನಲ್ ವೆಸ್ಟ್ ಮಿಸ್ಟರ್ ಬ್ಯಾಂಕ್ ಮತ್ತು ನಿಜಾಮರ ಉತ್ತರಾಧಿಕಾರಿಗಳಾದ ಮುಕರ್ರಮ್ ಜಹಾ ಮತ್ತು ಮುಫಖಮ್ ಜಹಾ ಪ್ರತಿವಾದಿಗಳಾಗಿದ್ದಾರೆ. ಈ ಪ್ರಕರಣದ ಕಾನೂನು ಶುಲ್ಕವಾಗಿ ಭಾರತ ಸರಕಾರ 1.50 ಲಕ್ಷ ಪೌಂಡ್ ಭರಿಸಿದೆಯಾದರೆ ನ್ಯಾಶನಲ್ ವೆಸ್ಟ್ ಮಿನಿಸ್ಟರ್ ಬ್ಯಾಂಕ್ 1.320 ಲಕ್ಷ ಪೌಂಡ್ಗಳನ್ನು ಹಾಗೂ ನಿಜಾಮರ ಉತ್ತರಾಧಿಕಾರಿಗಳು ಸುಮಾರು 60,000 ಪೌಂಡ್ಗಳನ್ನು ಭರಿಸಿದ್ದಾರೆ.
ಈ ಪ್ರಕರಣದಲ್ಲಿ ಪಾಕಿಸ್ಥಾನಕ್ಕೆ ಸಾರ್ವಭೌಮತೆಯ ರಕ್ಷಣೆ ಸಿಗದೆಂದು ನ್ಯಾಯಾಲಯವು ಹೇಳಿರುವುದರಿಂದ, ಕಾನೂನು ಪ್ರಕ್ರಿಯೆಯ ಮೂಲಕ ನಿಜಾಮರ ಘನೀಕೃತ ನಿಧಿಯನ್ನು ಮರಳಿ ಪಡೆಯುವುದಕ್ಕೆ ಭಾರತಕ್ಕೆ ಅವಕಾಶ ಸಿಕ್ಕಂತಾಗಿದೆ. ಈ ಬಗ್ಗೆ ಇದೀಗ ಭಾರತ ಸರಕಾರ ಮತ್ತು ನಿಜಾಮರ ಉತ್ತರಾಧಿಕಾರಿಗಳು ಜತೆಗೂಡಿ ಉನ್ನತ ಮಟ್ಟದಲ್ಲಿ ಸಮಾಲೋಚನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
67 ವರ್ಷಗಳಷ್ಟು ಹಳೆಯದಾಗಿರುವ ಹೈದರಾಬಾದ್ ನಿಧಿ ಪ್ರಕರಣದಲ್ಲಿ ನಿಜಾಮರಿಗೆ ಸೇರಿದ 10,07,940 ಪೌಂಡ್ ಮತ್ತು 9 ಶಿಲ್ಲಾಂಗ್ ಹಣವನ್ನು ಆಗಷ್ಟೇ ಹೊಸದಾಗಿ ರೂಪಿಸಲ್ಪಟ್ಟಿದ್ದ ಪಾಕಿಸ್ಥಾನಕ್ಕಾಗಿ, ಬ್ರಿಟನ್ನಲ್ಲಿನ ಹೈಕಮಿಶನರರ ಹೆಸರಿನಲ್ಲಿ ಲಂಡನ್ ಬ್ಯಾಂಕ್ ಖಾತೆಯಲ್ಲಿ ಇಡಲಾಗಿತ್ತು. ಆ ಹಣವನ್ನು ಭಾರತದ ಅತ್ಯಂತ ಶ್ರೀಮಂತ ಹಾಗೂ ಬೃಹತ್ ಸಂಸ್ಥಾನಗಳಲ್ಲಿ ಒಂದಾಗಿದ್ದ ಹೈದರಾಬಾದಿನ ಏಳನೇ ನಿಜಾಮರ ಪರವಾಗಿ ವ್ಯವಹರಿಸುತ್ತಿದ್ದ ಅವರ ಏಜಂಟ್ ಹಬೀಬ್ ಇಬ್ರಾಹಿಂ ರಹಮತೂಲಾ ಅವರು 1948ರಲ್ಲಿ ವೆಸ್ಟ್ಮಿನಿಸ್ಟರ್ ಬ್ಯಾಂಕ್ ಖಾತೆಗೆ (ಈಗ ಅದು ನ್ಯಾಟ್ವೆಸ್ಟ್ ಬ್ಯಾಂಕ್) ವರ್ಗಾಯಿಸಿದ್ದರು.