ನವದೆಹಲಿ : ಅಘೋಷಿತ ಆದಾಯವನ್ನು ಸೆಪ್ಟಂಬರ್ 30 ರ ಒಳಗೆ ಘೋಷಿಸಲು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಈ ಮೂಲಕ ದೇಶದೊಳಗಿನ ಕಾಳಧನ ಘೊಷಣೆಗೆ ಸೆಪ್ಟೆಂಬರ್ 30 ಕೊನೆ ಅವಕಾಶ ಎಂದು ತಿಳಿಸಿದ್ದಾರೆ.
ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದ 21ನೇ ಆವೃತ್ತಿಯಲ್ಲಿ ಮಾತನಾಡಿದ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ನಿಮ್ಮ ಆದಾಯವನ್ನು ಸ್ವಯಂ ಘೋಷಿತವಾಗಿ ಮಾಡಿದರೆ ಯಾವುದೇ ವಿಚಾರಣೆ ಎದುರಿಸಬೇಕಾಗಿಲ್ಲ .ಇದೇ ಕಾರಣಕ್ಕಾಗಿ ಪಾರದರ್ಶಕ ವ್ಯವಸ್ಥೆ ನಮ್ಮದಾಗಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಕರೆ ನೀಡಿದರು.
ಆದಾಯ ತೆರಿಗೆ ಪಾವತಿದಾರರಲ್ಲಿ ನಂಬುಗೆ ಹುಟ್ಟಿಸುವ ವಾತಾವರಣ ಮೂಡಿಸಬೇಕು ಎಂದು ಇತ್ತೀಚೆಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ವೇಳೆ ಹೇಳಿದ್ದೆ ಎಂದು ಮೋದಿ ಹೇಳಿದರು.
ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ವಿಜ್ನಾನಿಗಳು ತಿಳಿಸಿದ್ದಾರೆ.ಈ ನಿಟ್ಟಿನಲ್ಲಿ ನನ್ನ ಎಲ್ಲಾ ರೈತ ಸಹೋದರರಿಗೆ ಶುಭಾಷಯಗಳನ್ನುಸಲ್ಲಿಸುತ್ತೇನೆ ಎಂದ ಮೋದಿ, ದೇಶದ ರೈತರು ಕಳೆದ ಎರಡು ವರ್ಷಗಳಿಂದ ಸರಿಯಾದ ಮಳೆಯಿಲ್ಲದೆ ಬರಗಾಲದಿಂದ ಕಷ್ಟ ಅನುಭವಿಸಿದ್ದಾರೆ. ಕಳೆದೆರಡು ವಾರಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಸುದ್ದಿ ಬರುತ್ತಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ ಎಂದರು.
ರೈತರಂತೆಯೇ ನಮ್ಮ ವಿಜ್ನಾನಿಗಳೂ ದೇಶವನ್ನು ಉತ್ತುಂಗಕ್ಕೆ ಏರಿಸಲು ಅವಿರತ ಶ್ರಮಿಸುತ್ತಿದ್ದಾರೆ. ಏಕಕಾಲಕ್ಕೆ 20 ಸ್ಯಾಟಲೈಟ್ ಗಳನ್ನು ಹಾರಿಸಿಬಿಟ್ಟಿರುವ ಇಸ್ರೋ ವಿಜ್ನಾನಿಗಳು ಅಭಿನಂದನಾರ್ಹರು. ಅವುಗಳಲ್ಲಿ ಮೂರು ಶೈಕ್ಷಣಿಕ ಸ್ಯಾಟಲೈಟ್ ಗಳನ್ನು ತಯಾರಿಸಿದ ಪುಣೆಯ ಇಂಜಿನಿಯರಿಂಗ್ ಕಾಲೇಜು ಮತ್ತು ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಮೂವರು ಮಹಿಳೆಯರು ವಾಯುಪಡೆಗೆ ಪೈಲಟ್ಗಳಾಗಿ ಸೇರಿದ್ದಕ್ಕೆ ಪ್ರಧಾನಿ ಹರ್ಷ ವ್ಯಕ್ತ ಪಡಿಸಿದರು. ಅಲ್ಲದೇ ಭಾರತ ಇವರೆಲ್ಲರ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಹೇಳಿದರು.
1975ನೇ ಇಸವಿ ಇದೇ ದಿನ ಅಂದರೆ ಜೂನ್ 26ರಂದು ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದನ್ನು ನೆನಪಿಸಿದ ಪ್ರಧಾನಿ, ಭಾರತದ ಪ್ರಜಾಪ್ರಭುತ್ವಕ್ಕೆ ಅದೊಂದು ಕಪ್ಪು ದಿನ. ಭಾರತ ದೇಶದ ಜನರು ಆ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.