Untitled Document
Sign Up | Login    
Dynamic website and Portals
  
April 8, 2016

ಭಾರತ-ಪಾಕ್ ನಡುವಿನ ಶಾಂತಿ ಮಾತುಕತೆ ಸ್ಥಗಿತ: ಅಬ್ದುಲ್‌ ಬಾಸಿತ್

ನವದೆಹಲಿ : ಪಠಾಣ್‌ ಕೋಟ್‌ ದಾಳಿ ಕುರಿತು ಪರಿಶೀಲನೆ ನಡೆಸಲು ತನ್ನ ತನಿಖಾ ತಂಡವನ್ನು ಭಾರತಕ್ಕೆ ಕಳುಹಿಸಿದ್ದ ಪಾಕ್‌ ಈಗ ಭಾರತದೊಂದಿಗಿನ ಶಾಂತಿ ಮಾತುಕತೆಯನ್ನೇ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.

ಅಲ್ಲದೆ, ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವ ಬಗ್ಗೆ ಒಪ್ಪಂದವೇನೂ ಆಗಿಲ್ಲ ಎಂದು ಹೇಳಿದೆ. ಈ ಮೂಲಕ ನೆರೆಯ ದೇಶದ ಜತೆ ಸ್ನೇಹ ಹಸ್ತ ಚಾಚಿದ್ದ ಪ್ರಧಾನಿ ನರೇಂದ್ರ ಮೋದಿ ಸಹಿತ ಸಮಸ್ತ ಭಾರತೀಯರಿಗೆ ದ್ರೋಹ ಎಸಗಿದೆ. ಪಾಕ್‌ನ ಗುರುವಾರದ ಹೇಳಿಕೆಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವಾಲಯ, ಪಾಕ್‌ ತಂಡಕ್ಕೆ ಭಾರತ ಭೇಟಿಗೆ ಅವಕಾಶ ನೀಡಿದಂತೆ, ನಮ್ಮ ತಂಡದ ಪಾಕ್‌ ಭೇಟಿಗೆ ಅವಕಾಶ ನೀಡುವ ಕುರಿತು ಮೊದಲೇ ಮಾತುಕತೆ ನಡೆಸಲಾಗಿತ್ತು ಎಂದು ಸ್ಪಷ್ಟಪಡಿಸಿದೆ.

ಗುರುವಾರ ನಡೆದಿರುವ ಈ ಏಕಾಏಕಿ ಬೆಳವಣಿಗೆ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಯ ಯತ್ನಕ್ಕೆ ಭಾರೀ ಪೆಟ್ಟು ನೀಡುವ ಸಾಧ್ಯತೆ ಇದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ನಿವಾಸಕ್ಕೆ ಅನಿರೀಕ್ಷಿತವಾಗಿ ನೀಡಿದ ಭೇಟಿಯಿಂದ ಉಭಯ ದೇಶಗಳ ಸಂಬಂಧ ಸುಧಾರಿಸಿತು ಎಂದುಕೊಳ್ಳುತ್ತಿರುವಾಗಲೇ, ನಡೆದಿರುವ ಈ ಬೆಳವಣಿಗೆ ಸಾಕಷ್ಟು ಚರ್ಚೆ ಮತ್ತು ಕುತೂಹಲಕ್ಕೆ ಗ್ರಾಸವಾಗಿದೆ.

ವಿದೇಶಿ ವರದಿಗಾರರ ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ದಿಲ್ಲಿಯಲ್ಲಿನ ಪಾಕ್‌ ರಾಯಭಾರಿ ಅಬ್ದುಲ್‌ ಬಾಸಿತ್‌, 'ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಯನ್ನು ಸದ್ಯಕ್ಕೆ ಅಮಾನತಿನಲ್ಲಿರಿಸಲಾಗಿದೆ' ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ. 'ಈ ಹಂತದಲ್ಲಿ ಭಾರತ ಮತ್ತು ಪಾಕ್‌ ನಡುವಿನ ಶಾಂತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ನನಗೆ ಗೊತ್ತಿರುವ ಪ್ರಕಾರ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ನಡುವೆ ಈಗ ಯಾವುದೇ ಮಾತುಕತೆ ನಿಗದಿಯಾಗಿಲ್ಲ' ಎಂದರು.

ಪಠಾಣ್‌ ಕೋಟ್‌ ದಾಳಿ ತನಿಖೆಗೆ ಸಂಬಂಧಿಸಿದ ಪ್ರಶ್ನೆಗೂ ಉತ್ತರಿಸಿದ ಬಾಸಿತ್‌, 'ಭಾರತಕ್ಕೆ ಪಾಕಿಸ್ಥಾನ ತಂಡವು ಪಠಾಣ್‌ಕೋಟ್‌ ದಾಳಿ ತನಿಖೆ ಸಂಬಂಧ ಭೇಟಿ ನೀಡಿತ್ತು. ಹಾಗಂತ ಭಾರತ ತಂಡವು ಪಾಕ್‌ಗೆ ಭೇಟಿ ನೀಡಬೇಕು ಎಂದು ಪರಸ್ಪರ ಒಪ್ಪಂದವೇನೂ ಆಗಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು. ಹಾಗಿದ್ದರೆ ಭಾರತ ತಂಡವು ಪಾಕ್‌ಗೆ ಭೇಟಿ ನೀಡುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ 'ಇದನ್ನು ನಿಮ್ಮ ಊಹೆಗೇ ಬಿಟ್ಟಿದ್ದೇನೆ' ಎಂದು ಸೂಚ್ಯವಾಗಿ ನುಡಿದರು.

ಭಾರತದ ಜತೆ ಪಾಕಿಸ್ಥಾನ ಯಾವತ್ತೂ ಶಾಂತಿ ಬಯಸುತ್ತದೆ. ಇದನ್ನು ಬುಡಮೇಲು ಮಾಡಲು ಯತ್ನಗಳನ್ನು ಯಾರು ಮಾಡುತ್ತಿದ್ದಾರೆ ಎಂಬುದೂ ಗೊತ್ತು. ಆದರೆ ಭಯೋತ್ಪಾದನೆ ವಿರುದ್ಧ ಪಾಕಿಸ್ಥಾನ ಒಗ್ಗಟ್ಟಾಗಿದೆ. ಹೀಗಾಗಿ ಬುಡಮೇಲು ಯತ್ನಗಳು ಫ‌ಲಿಸವು ಎಂದು ಬಾಸಿತ್‌ ಸ್ಪಷ್ಟಪಡಿಸಿದರು.

ಪಠಾಣ್‌ ಕೋಟ್‌ ವಾಯುನೆಲೆ ಮೇಲಿನ ದಾಳಿ ಕುರಿತಂತೆ ಭಾರತ ನಮಗೆ ಭದ್ರತಾ ಪಡೆಗಳ ಸಾಕ್ಷ್ಯಗಳನ್ನು ಹಾಜರುಪಡಿಸಲಿಲ್ಲ ಎಂದು ಪಾಕಿಸ್ಥಾನ ಹೇಳಿದ ಬೆನ್ನಲ್ಲೇ ಭಾರತ ಇದಕ್ಕೆ ತಿರುಗೇಟು ನೀಡಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾದ ಭದ್ರತಾ ಸಿಬಂದಿಯ ಸಾಕ್ಷ್ಯಗಳನ್ನು ಒದಗಿಸಲಾಗದು ಎಂದು ಪಾಕ್‌ ಜಂಟಿ ತನಿಖಾ ತಂಡ ಭಾರತಕ್ಕೆ ಆಗಮಿಸುವಾಗಲೇ ಸ್ಪಷ್ಟಪಡಿಸಲಾಗಿತ್ತು. ಅದನ್ನು ಅದು ಒಪ್ಪಿಕೊಂಡಿತ್ತು ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ನಡುವೆ ಪಾಕ್‌ ನ ಈ ಏಕಪಕ್ಷೀಯ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್‌, ಇದೊಂದು ದುರದೃಷ್ಟಕರ ಬೆಳವಣಿಗೆ. ಜತೆಗೆ ಶಾಂತಿ ಮಾತುಕತೆಗೆ ಪಾಕ್‌ ಹೇಗೆ ಪದೇ ಪದೇ ಅಡ್ಡಿ ಮಾಡುತ್ತಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಕಿಡಿಕಾರಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited