ನವದೆಹಲಿ : ಭೂಸ್ವಾಧೀನ ಕಾಯ್ದೆ ರೈತ ವಿರೋಧಿಯಲ್ಲ. ಅದು ರೈತರ ಮತ್ತು ಗ್ರಾಮಗಳ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ
6ನೇ ಬಾರಿ ಆಕಾಶವಾಣಿಯಲ್ಲಿನ ಮನ್ ಕೀ ಬಾತ್ ನಲ್ಲಿ ತಮ್ಮ ಮಾತನ್ನು ಬಿಚ್ಚಿಟ್ಟ ಪ್ರಧಾನಿ, ನಮಗೆ ರೈತರ, ಅವರ ಮಕ್ಕಳ ಹಾಗೂ ಹಳ್ಳಿಗಳ ಏಳಿಗೆ ಮುಖ್ಯವಾಗಿದೆ ಎಂದು ಹೇಳುವ ಮೂಲಕ ತಮ್ಮ 30 ನಿಮಿಷಗಳ ಆಲ್ ಇಂಡಿಯಾ ರೇಡಿಯೋ ಭಾಷಣದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಭೂಸ್ವಾಧೀನ ವಿಧೇಯಕಕ್ಕೆ ಸಂಬಂಧಿಸಿದಂತೆ ದೇಶದ ಹಲವು ಭಾಗಗಳ ರೈತರಿಂದ ಬಂದಿರುವ ಸಲಹೆ, ಸೂಚನೆ, ಮಾಹಿತಿ ನೋಡಿ ನನ್ನ ಹೃದಯ ತುಂಬಿ ಬಂದಿದೆ. ನನ್ನ ಪಾಲಿಗೆ ಇದೊಂದು ಶಿಕ್ಷಣ ಎಂದೇ ಭಾವಿಸುತ್ತೇನೆ. ಹಾಗಾಗಿ ಈ ಬಾರಿಯ ಮನ್ ಕೀ ಬಾತ್ ನನ್ನ ಪಾಲಿಗೆ ಈ ಹಿಂದಿಗಿಂತ ವಿಶಿಷ್ಟವಾಗಿದೆ.
ರೈತರ ಕುರಿತು ಮಾತನಾಡುತ್ತಿರುವುದು ನನ್ನ ಸೌಭಾಗ್ಯ ಅಂದುಕೊಂಡಿದ್ದೇನೆ. ಎಲ್ಲಾ ರಂಗಗಳಲ್ಲೂ ರೈತರು ಸಮಸ್ಯೆಯ ಸುಳಿಯಲ್ಲಿದ್ದಾರೆ. ರೈತರಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ರೈತರ ಸಮಸ್ಯೆ ಕುರಿತು ರಾಜ್ಯ ಸರ್ಕಾರಗಳೊಂದಿಗೂ ಚರ್ಚಿಸಿದ್ದೇನೆ. ರೈತರಿಗೆ ಸಮಸ್ಯೆಯುಳ್ಳ ಪ್ರದೇಶಗಳಿಗೆ ಸಚಿವರುಗಳು ಭೇಟಿ ನೀಡುತ್ತಾರೆ ಎಂದರು. ನನ್ನ ಪ್ರೀತಿಯ ರೈತ ಬಾಂಧವರೇ ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ. ನಿಮ್ಮ ಸಂಕಷ್ಟದ ಸ್ಥಿತಿಯಲ್ಲಿ ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು.
ದೇಶದ ವಿದ್ಯುತ್ ಸಮಸ್ಯೆ, ಮಕ್ಕಳ ಶಿಕ್ಷಣದ ಸಮಸ್ಯೆ, ಮಹಿಳೆಯರ ಸಮಸ್ಯೆ ಬಗ್ಗೆ ಅರಿವಾಗಿದೆ. ಸ್ವಾತಂತ್ರ್ಯ ಬಂದು 68 ವರ್ಷ ಕಳೆದರೂ ಹಳೇ ಕಾನೂನಿದೆ. ಆದರೆ ರೈತರ ಅಭಿವೃದ್ಧಿಗೆ ಕಾನೂನಿಗೆ ತಿದ್ದುಪಡಿ ತರಲು ಹೊರಟರೆ ಆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತೀರಾ ಎಂದು ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
60 ವರ್ಷಗಳಷ್ಟು ಹಳೆಯ ಕಾನೂನಿಗೆ ತಿದ್ದುಪಡಿ ತರಲು ಹೊರಟಿದ್ದೇವೆ. ಈ ಹಿನ್ನೆಲೆಯಲ್ಲಿ ಜನಪರ, ರೈತಪರ ಬದಲಾವಣೆ ಅಗತ್ಯವಿದೆ. ರೈತರ ಭೂಮಿಗೆ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡುತ್ತಿದ್ದೇವೆ. ಎಲ್ಲರೂ ಸೇರಿ ರೈತರಿಗಾಗಿ ದುಡಿಯೋಣ ಎಂದಿದ್ದೇನೆ. ಆದರೆ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಮನ್ ಕೀ ಬಾತ್ ನಲ್ಲಿ ದೂರಿದರು.
ಭೂಸ್ವಾಧೀನ ವಿಧೇಯಕ ರೈತ ವಿರೋಧಿಯಲ್ಲ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಬೇಕೋ, ಬೇಡವೋ. ನಿಮ್ಮ ಹೊಲ ಗದ್ದೆಗಳಿಗೆ ನೀರು ಹಾಯಿಸಲು ಕೆರೆ ಬೇಡವೇ ಇವೆಲ್ಲ ಬೇಕಿದ್ರೆ ಭೂಸ್ವಾಧೀನ ಅಗತ್ಯ. ನಿಮ್ಮ ಅನುಮಾನಗಳನ್ನು ನಾನು ಪರಿಹರಿಸುತ್ತೇನೆ. ನಿಮ್ಮ ಅನುಮಾನಗಳ ಬಗ್ಗೆ ಆಕಾಶವಾಣಿಗೆ ಪತ್ರ ಬರೆಯಿರಿ ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಭೂಸ್ವಾಧೀನ ವಿಧೇಯಕ ಜಾರಿಗೆ ರಾಜ್ಯಗಳ ತೀವ್ರ ವಿರೋಧ ವ್ಯಕ್ತಪಡಿಸಿವೆ. ಅದರಲ್ಲೂ ಬಹುತೇಕ ಎಲ್ಲಾ ರಾಜ್ಯಗಳು ವಿರೋಧ ಮಾಡಿದ್ದವು. ಆ ನೆಲೆಯಲ್ಲಿ ರಾಜ್ಯಗಳ ಮಾತಿಗೆ ನಾವು ಬೆಲೆ ಕೊಟ್ಟಿದ್ದೇವೆ. ವಿಧೇಯಕ ಜಾರಿ ಮಾಡುವುದು ಬಿಡುವುದು ರಾಜ್ಯಗಳಿಗೆ ಬಿಟ್ಟಿದ್ದು ಎಂದು ಮನ್ ಕೀ ಬಾತ್ ರೇಡಿಯೋ ಭಾಷಣದಲ್ಲಿ ಮೋದಿ ಘೋಷಣೆ ಮಾಡಿದ್ದಾರೆ.