ಹೈದ್ರಾಬಾದ್ : ಮಾಜಿ ಕೇಂದ್ರ ಸಚಿವೆ, ಕಾಂಗ್ರೆಸ್ ರಾಜ್ಯಸಭಾ ಸಂಸದೆ ರೇಣುಕಾ ಚೌಧರಿ ವಿರುದ್ಧ ಎಸ್.ಸಿ, ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ಪೊಲೀಸರು, ರೇಣುಕಾ ಚೌಧರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ರಾಮ್ ಜಿ ಎಂಬುವವರಿಗೆ ತಮ್ಮ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ನಂಬಿಸಿ 1.10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ. ಆದರೆ ಟಿಕೆಟ್ ಕೈತಪ್ಪಿದಾಗ ಹಣ ವಾಪಸ್ ನೀಡುವಂತೆ ಕೇಳಿದ್ದ ರಾಮ್ ಜಿ ಪತ್ನಿಯನ್ನು ನಿಂದಿಸಿದ್ದಾರೆ ಎಂದು ರೇಣುಕಾ ಚೌಧರಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಮ್ ಜಿ ಮೃತಪಟ್ಟ ನಂತರ ಆತ ನೀಡಿದ್ದ 1.10 ಕೋಟಿ ಹಣವನ್ನು ವಾಪಸ್ ನೀಡುವಂತೆ ಆತನ ಪತ್ನಿ ಕಲಾವತಿ ರೇಣುಕಾ ಚೌಧರಿ ಅವರನ್ನು ಮನವಿ ಮಾಡಿದ್ದಾರೆ. ಆದರೆ ರೇಣುಕಾ ಚೌಧರಿ ಹಣ ಹಿಂತಿರುಗಿಸುವುದಕ್ಕೆ ನಿರಾಕರಿಸಿದ್ದೂ ಅಲ್ಲದೇ ಕಲಾವತಿ ಅವರ ಜಾತಿಯ ಬಗ್ಗೆ ನಿಂದನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೇಣುಕಾ ಚೌಧರಿ ಹೈದ್ರಾಬಾದ್ ಕೋರ್ಟ್ ಮೆಟ್ಟಿಲೇರಿದ್ದರು. ಜಾತಿ ನಿಂದನೆ ಹಾಗೂ ಲಂಚ ಪಡೆದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಹೈದ್ರಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ರೇಣುಕಾ ಚೌಧರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದೇ ವೇಳೆ ರೇಣುಕಾ ಚೌಧರಿ ವಿರುದ್ಧ ವಂಚನೆ ಪ್ರಕರಣವನ್ನೂ ದಾಖಲಿಸಲಾಗಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ಭಾಗದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಗೆ ತನ್ನ ಪಕ್ಷದ ನಾಯಕಿ ವಿರುದ್ಧ ಜಾತಿ ನಿಂದನೆ, ಲಂಚ ಪಡೆದು ವಂಚನೆ ಮಾಡಿರುವ ಪ್ರಕರಣ ದಾಖಲಾಗಿರುವುದು ಮತ್ತಷ್ಟು ಮುಜುಗರ ಉಂಟುಮಾಡಿದೆ.