ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಮುಂದಾಗಿರುವ ಅರವಿಂದ್ ಕೇಜ್ರಿವಾಲ್ ಬಣದ ಹಿರಿಯ ನಾಯಕರು ಯೋಗೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ.
ಇದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಗೆ ಹಿಂದಿರುಗಿದ ಕೆಲವೇ ಘಂಟೆಗಳಲ್ಲಿ ನಡೆದಿದೆ.ಎರಡು ಬಣಗಳು ಚರ್ಚೆಯನ್ನು ಧನಾತ್ಮಕ ಎಂದು ಬಣ್ಣಿಸಿವೆ.
ಆಪ್ ಪಕ್ಷದ ಮುಖಂಡರಾದ ಸಂಜಯ್ ಸಿಂಗ್, ಕುಮಾರ್ ವಿಶ್ವಾಸ, ಅಶುತೋಶ್ ಮತ್ತು ಆಶಿಶ್ ಕೇತನ್ ಸೋಮವಾರ ಸಂಜೆ ಯೋಗೇಂದ್ರ ಅವರೊಂದಿಗೆ ನಡೆಸಿದ ಚರ್ಚೆ ಬೆಳಗ್ಗೆ ಮೂರು ಘಂತೆಯವರೆಗೂ ಮುಂದುವರೆಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.
ಯೋಗೇಂದ್ರ ಮತ್ತು ಪ್ರಶಾಂತ್ ಭೂಷಣ್ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಚರ್ಚೆ ನಡೆಸಿ ಭಿನಾಭಿಪ್ರಾಯಗಳಿಗೆ ಕೊನೆ ಹಾಡಬೇಕು ಎಂದಿದ್ದ ಹಿನ್ನಲೆಯಲ್ಲೇ ಈ ಚರ್ಚೆ ನಡೆದಿರುವುದು ಕುತೂಹಲ ಹುಟ್ಟಿಸಿದೆ.
ಈ ಇಬ್ಬರೂ ನಾಯಕರು ಕೇಜ್ರಿವಾಲ್ ಅವರಿಗೆ ಎಸ್ ಎಂ ಎಸ್ ಕಳಿಸಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಕೇಜ್ರಿವಾಲ್ ಅವರಿಂದ ಯಾವುದೇ ಪ್ರತಿಕ್ರಿಯೆ ಬರದೆ ಹೋದರೂ ಕೇಜ್ರಿವಾಲ್ ಬಣದ ನಾಯಕರು ಯೋಗೇಂದ್ರ ಅವರನ್ನು ಭೇಟಿ ಮಾಡಿದ್ದು ಪಕ್ಷದ ಭಿನ್ನಾಭಿಪ್ರಾಯಗಳಿಗೆ ತಾತ್ಕಾಲಿಕ ಶಮನ ಸಿಕ್ಕಂತಾಗಿದೆ.