ಬೆಂಗಳೂರು : ರಾಜ್ಯ ಸರ್ಕಾರ ಗಣಿಗಾರಿಕೆ, ನಡೆಸಲು 8 ಕಂಪೆನಿಗಳ ಗಣಿ ಗುತ್ತಿಗೆಯನ್ನು ನವೀಕರಣ ಮಾಡಿರುವ ವಿಷಯ ವಿಧಾನಪರಿಷತ್ ನಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಪ್ರತಿಪಕ್ಷ ಬಿಜೆಪಿ ಈ ವಿಷಯದ ಬಗ್ಗೆ ನಿಲುವಳಿ ಸೂಚನೆಯಡಿ ಅವಕಾಶ ನೀಡಬೇಕೆಂದು ಪಟ್ಟು ಹಿಡಿಯಿತು. 8 ಗಣಿ ಕಂಪೆನಿಗಳಿಗೆ ನಿಯಮಾವಳಿ ಉಲ್ಲಂಘಿಸಿ ಗಣಿ ಗುತ್ತಿಗೆ ನವೀಕರಣ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗಿದೆ. ಇದೊಂದು ಗಂಭೀರ ವಿಷಯ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಗಣಿ ಗುತ್ತಿಗೆ ನವೀಕರಣದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದೆ. ಅದಕ್ಕೆ ಕಾನೂನು ಇಲಾಖೆ ಉತ್ತರ ನೀಡಿದ್ದು , ಗಣಿ ಗುತ್ತಿಗೆ ನವೀಕರಣ ಮಾಡಿರುವುದು ಊರ್ಜಿತವಲ್ಲವೆಂದು ಉತ್ತರದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಹೀಗಿದ್ದಾಗ ಗಣಿ ಕಂಪನಿಗಳ ಗುತ್ತಿಗೆಯನ್ನು ಸರ್ಕಾರ ರದ್ದು ಮಾಡಬೇಕು. ಆದರೆ ಮುಂದುವರೆಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಹಿರಿಯ ಸದಸ್ಯ ಕೆ.ಬಿ.ಶಾಣಪ್ಪ, ಸಿದ್ದರಾಮಣ್ಣ ಬೆಂಬಲಿಸಿದರು.
ಸಭಾನಾಯಕ ಎಸ್.ಆರ್.ಪಾಟೀಲ್, ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕಳೆದ ಅಧಿವೇಶನದಲ್ಲೇ ಚರ್ಚೆ ನಡೆಸಿವೆ. ಸಿಎಂ ಸಿದ್ದರಾಮಯ್ಯ ಸುದೀರ್ಘ ಉತ್ತರ ನೀಡಿದ್ದಾರೆ. ಸರ್ಕಾರ ಎಲ್ಲಿಯೂ ಕಾನೂನು ಉಲ್ಲಂಘಿಸಿ ನವೀಕರಣ ಮಾಡಿಕೊಟ್ಟಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ನವೀಕರಣ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಇದಕ್ಕೆ ತಕರಾರು ತೆಗೆದ ಈಶ್ವರಪ್ಪ ನಾನೇನು ಆಡುವ ಹುಡುಗನಲ್ಲ. ನನಗೂ ಕಾನೂನಿನ ಅರಿವಿದೆ. ಕಳೆದ ಅಧಿವೇಶನದಲ್ಲಿ ಇದರ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದೆ. ಅಲ್ಲದೆ ಸ್ಪಷ್ಟನೆ ಕೋರಿ ಸಿಎಂಗೆ ಪತ್ರ ಬರೆದಿದ್ದೆ. ನಿಯಮ 59ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದೀರಿ. ಸಿಎಂ ಸಹ ಹಾರಿಕೆಯ ಉತ್ತರ ನೀಡಿದ್ದರು ಎಂದು ಆಪಾದಿಸಿದರು.
ಒಂದು ಬಾರಿ ಸದನದಲ್ಲಿ ಚರ್ಚೆಯಾದ ವಿಷಯಕ್ಕೆ ಮತ್ತೆ ಅವಕಾಶ ಇಲ್ಲ ಎಂದು ಉಗ್ರಪ್ಪ, ಸಭಾನಾಯಕ ಎಸ್.ಆರ್.ಪಾಟೀಲ್ ಸಮಜಾಯಿಷಿ ನೀಡಿದರು. ಕಾನೂನು ಇಲಾಖೆಯೇ ಗಣಿ ಕಂಪೆನಿಗಳಿಗೆ ಅನುಮತಿ ನೀಡಿರುವುದು ಅಸಿಂಧು ಎಂದು ಹೇಳಿರುವಾಗ ವಿಷಯದ ಗಂಭೀರತೆ ಅರಿತು ಚರ್ಚಗೆ ಅವಕಾಶ ನೀಡಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.
ಸಭಾನಾಯಕ ಎಸ್.ಆರ್.ಪಾಟೀಲ್ ಮದ್ಯಪ್ರವೇಶಿಸಿ ಸರ್ಕಾರ ಉತ್ತರ ಕೊಡಲು ಸಮರ್ಥವಾಗಿದೆ. ನಿಯಮವನ್ನು ಬದಲಿಸಿ ಚರ್ಚೆಗೆ ಅವಕಾಶ ನೀಡುವುದು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದರು. ಆಡಳಿತ-ಪ್ರತಿಪಕ್ಷಗಳ ಸದಸ್ಯರ ವಾದ-ವಿವಾದ ಆಲಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ನಿಯಮ 59ರ ಬದಲಾಗಿ 68ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿ ಕೊಡುವುದಾಗಿ ಹೇಳಿ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.