ಬೆಂಗಳೂರು : ದಲಿತ ಮುಖ್ಯಮಂತ್ರಿ ಕೂಗು ಇನ್ನೂ ಕೇಳಿಬರುತ್ತಿರುವ ಮಧ್ಯೆಯೇ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಬಜೆಟ್ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವೆ ಬಿರುಸಿನ ಚರ್ಚೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ.
ದಲಿತರನ್ನು ಓಲೈಸಿಕೊಳ್ಳಲು ಎಂಬಂತೆ ಆ ಜನಾಂಗಕ್ಕೆ ಬಂಪರ್ ಕೊಡುಗೆಗಳನ್ನು ಒಳಗೊಂಡ ಬಜೆಟ್ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟೀಕಾಕಾರರಿಗೆ ತಿರುಗೇಟು ನೀಡುವುದಕ್ಕೂ ಈ ಅಧಿವೇಶನ ಸೂಕ್ತ ವೇದಿಕೆಯಾಗಲಿದೆ.
ಬಜೆಟ್ ಕುರಿತ ಚರ್ಚೆಯೇ ಈ ಅಧಿವೇಶನದ ಮುಖ್ಯ ಜೀವಾಳವಾಗಿದ್ದರೂ ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ತಂತ್ರ ರೂಪಿಸುತ್ತಿವೆ.
ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಶನ್ ವಿಚಾರ ಕುರಿತ ಚರ್ಚೆ ಇದೀಗ ಸ್ವಲ್ಪ ಗೌಣವಾಗಿರುವುದರಿಂದ ಮತ್ತು ನ್ಯಾ.ಎಚ್.ಎಸ್.ಕೆಂಪಣ್ಣ ಆಯೋಗ ತನ್ನ ಕೆಲಸ ಆರಂಭಿಸಿರುವುದರಿಂದ ಈಗ ಈ ಅಧಿವೇಶನದಲ್ಲಿ ಅರ್ಕಾವತಿ ಕುರಿತು ಹೆಚ್ಚು ಚರ್ಚೆಯಾಗಲಿ ಅಥವಾ ವಾಗ್ದಾಳಿಯಾಗಲಿ ನಡೆಯುವ ಸಾಧ್ಯತೆ ಕಡಮೆ. ಆದರೆ, ಅರಣ್ಯ ಒತ್ತುವರಿ ತೆರವು, ಗಣಿ ಗುತ್ತಿಗೆ ನವೀಕರಣ, ಇಂಧನ ಇಲಾಖೆಯ ವೈಫಲ್ಯ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಅಪಸ್ವರ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಬಹುದು.
ಬಯಲುಸೀಮೆಯ ಶಾಶ್ವತ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಯುವುದು ನಿಶ್ಚಿತ. ಮುಖ್ಯವಾಗಿ ಬಜೆಟ್ ನಲ್ಲಿಯ ವಿಚಾರಗಳನ್ನೇ ಪ್ರಸ್ತಾಪಿಸಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಪ್ರತಿಪಕ್ಷಗಳ ಮುಖಂಡರು ಸಜ್ಜಾಗುತ್ತಿದ್ದಾರೆ. ಸಾಲದ ಪ್ರಮಾಣ ಹೆಚ್ಚಳ, ಆದಾಯದ ಕೊರತೆಗಳನ್ನು ಪ್ರಮುಖವಾಗಿ ಮುಂದಿಟ್ಟುಕೊಂಡು ಬಜೆಟ್ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದಿಂದ ಅನುದಾನದಲ್ಲಿ ಕಡಿತವಾಗಿರುವ ಬಗ್ಗೆಯೂ ಆಡಳಿತಾರೂಢ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷ ಬಿಜೆಪಿಗೆ ತಿರುಗೇಟು ನೀಡಲು ಸಿದ್ಧವಾಗಿದೆ.