BW News Bureau : ಬೆಂಗಳೂರು ನಗರದ ಸುತ್ತಮುತ್ತ ಸರ್ಕಾರಿ ಹಾಗೂ ಕೆರೆ ಜಮೀನು ಒತ್ತುವರಿ ಮಾಡಿಕೊಂಡಿದ್ದವರ ಪಟ್ಟಿ ಬಿಡುಗಡೆ ಮಾಡಿರುವ ಸರ್ಕಾರ, ಭೂಗಳ್ಳರ ಪತ್ತೆಗೆ ವಿಶೇಷ ಘಟಕ ಸ್ಥಾಪಿಸಲು ತೀರ್ಮಾನಿಸಿದೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಸರ್ಕಾರ ಇತ್ತೀಚೆಗೆ ಒತ್ತುವರಿ ತೆರವು ಮಾಡಿದ್ದರ ಅಂಕಿ-ಅಂಶ ಬಿಡುಗಡೆ ಮಾಡಿದರು. ಈ ಪೈಕಿ ಸಂಸದ ಸಾಂಗ್ಲಿಯಾನ, ಪಾಲಿಕೆಯ ಮಾಜಿ ಸದಸ್ಯೆ ಮಾರಿಮುತ್ತು, ಪ್ರತಿಷ್ಠಿತ ಬಿಲ್ಡರ್ ಸಂಸ್ಥೆಗಳು ಸೇರಿದಂತೆ ಭೂ ಒತ್ತುವರಿದಾರರು ನಗರದ 54 ತಾಣಗಳಲ್ಲಿ ಕಬಳಿಸಿದ್ದ 25843 ಕೋಟಿ ರೂ. ಮೌಲ್ಯದ 1547.10 ಎಕರೆ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಒತ್ತುವರಿದಾರರ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ದಾವೆ ದಾಖಲಿಸಿ ವಿಶೇಷ ನ್ಯಾಯಾಲಯಕ್ಕೆ ಎಲ್ಲ ಪ್ರಕರಣ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಿ ಭೂಮಿ ತೆರವುಗೊಳಿಸಲಾಗುತ್ತಿದ್ದು, ಇದು ನಿಲ್ಲುವುದಿಲ್ಲ. ಭೂಗಳ್ಳರು ಹಾಗೂ ಅವರ ಜತೆ ಶಾಮೀಲಾದ ಅಧಿಕಾರಿಗಳನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಒತ್ತುವರಿ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಒತ್ತುವರಿ ಕಾರ್ಯಾಚರಣೆಯಿಂದ ಸಂತ್ರಸ್ತರಾದವರ ಅಹವಾಲು ಸ್ವೀಕರಿಸಲು ವಿಶೇಷ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಯಾರ್ಯಾರಿಂದ ನಿವೇಶನ ಖರೀದಿಸಿದರು, ಯಾರಿಂದ ಯಾರಿಗೆ ಮಾಲಿಕತ್ವ ವರ್ಗಾವಣೆಯಾಯಿತು. ಯಾವಾಗ ನೋಂದಣಿ ಮಾಡಿಸಲಾಯಿತು ಎಂಬಿತ್ಯಾದಿ ಮಾಹಿತಿ ನೀಡಬಹುದು. ಇದು ಭೂಗಳ್ಳರನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯ ಪುನರ್ ವಸತಿ ವಿಭಾಗದ ಕಾರ್ಯದರ್ಶಿ ಉಸ್ತುವಾರಿಯಲ್ಲಿ ವಿಶೇಷ ಘಟಕ ಕಾರ್ಯನಿರ್ವಹಿಸಲಿದ್ದು, ಸಂತ್ರಸ್ತರಿಂದ ಸಲ್ಲಿಕೆಯಾಗುವ ಎಲ್ಲಾ ದಾಖಲೆಗಳನ್ನು ಪರಾಮರ್ಶೆ ಮಾಡಲಿದೆ. ಅದರ ಆಧಾರದ ಮೇಲೆ ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಹಾಗೂ ಅವರಿಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಒತ್ತುವರಿಗೆ ಸಂಬಂಧಿಸಿದಂತೆ ಇದುವರೆಗೂ 466 ಮಂದಿ ಮೇಲೆ ಎಫ್ಐಆರ್ ದಾಖಲಿಸಿದ್ದು, 9 ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ರಾಜ್ಯ ಹೈ ಕೋರ್ಟ್ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಅನುಮತಿ ನೀಡಿರುವುದರಿಂದ ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
1971ರ ಭೂ ಕಂದಾಯ ಕಾಯ್ದೆ 192ರನ್ವಯ ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 192 ಬಿ ಅನ್ವಯ ಸಹಕಾರ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರ ಕೆರೆಗಳ ಒತ್ತುವರಿ ತೆರವಿಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತೆಗೆದುಕೊಂಡ ನಿಲುವಿನ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕಾದ ವಿಪಕ್ಷಗಳು ಮೊಸಳೆ ಕಣ್ಣೀರು ಸುರಿಸಿ ರಾಜಕೀಯ ಮಾಡಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.