ನವದೆಹಲಿ : ಸಂಸತ್ತಿನ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಲೋಕಸಭೆಯಲ್ಲಿ ಸೋಮವಾರದಿಂದ ಆರಂಭವಾಗಲಿದ್ದು, ಏ.3ರಂದು ರಾಷ್ಟ್ರಪತಿ ಹೊರಡಿಸಿರುವ ಸುಗ್ರೀವಾಜ್ನೆಯನ್ನು ಶಾಸನವಾಗಿ ಪರಿವರ್ತಿಸಲು ಸದನದಲ್ಲಿ ಮಸೂದೆ ಮಂಡನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಮಂಡಿಸಿದ್ದ ವಿಧೇಯಕಕ್ಕೆ ಲೋಕಸಭೆಯ ಮೊದಲಾರ್ಧದ ಅಧಿವೇಶನದಲ್ಲಿ ಒಪ್ಪಿಗೆ ದೊರೆತಿತ್ತು. ಆದರೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದಿಂದಾಗಿ ಈ ಮಸೂದೆ ಅಂಗೀಕಾರವಾಗಿರಲಿಲ್ಲ. ಈ ನಡುವೆ, ಭೂಸ್ವಾಧೀನ ವಿಧೇಯಕಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹಿಂದೆ ಹೊರಡಿಸಿದ್ದ ಸುಗ್ರೀವಾಜ್ನೆಯ ವಾಯಿದೆ ಮುಗಿದಿತ್ತು.
ಈ ಹಿನ್ನೆಲೆಯಲ್ಲಿ ಏ.3ರಂದು ಕೇಂದ್ರ ಸರ್ಕಾರ ಹೊಸದಾಗಿ ಸುಗ್ರೀವಾಜ್ನೆ ಹೊರಡಿಸಿತ್ತು. ಹೊಸದಾಗಿ ಸುಗ್ರೀವಾಜ್ನೆ ಹೊರಡಿಸಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಸೂದೆ ರದ್ದಾದಂತಾಗಿದೆ. ಹೀಗಾಗಿ ಹೊಸದಾಗಿ ವಿಧೇಯಕ ಮಂಡನೆ ಮಾಡಬೇಕಾಗಿದೆ. ಅದರಂತೆ ಸೋಮವಾರ ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆಯಲು ಸರ್ಕಾರ ನಿರ್ಧರಿಸಿದೆ. ಅದಾದ ನಂತರ ರಾಜ್ಯಸಭೆಯಲ್ಲಿ ಮಂಡನೆ ಮಾಡಲಿದೆ. ರಾಜ್ಯಸಭೆ ಕಲಾಪ ಏ.23ರಿಂದ ಆರಂಭವಾಗಲಿದೆ. ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳು ಒಟ್ಟು 13 ದಿನಗಳ ಕಾಲ ನಡೆಯಲಿವೆ.