ಪಾಟ್ನಾ : ಕೇಂದ್ರ ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಕಾಯ್ದೆ ಮಸೂದೆ ವಿರೋಧಿಸಿ ಸಂಯುಕ್ತ ಜನತಾದಳ (ಜೆಡಿಯು) ಕಾರ್ಯಕರ್ತರು ಬಿಹಾರದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಬೆಂಬಲವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಂದು ದಿನ ಉಪವಾಸ ಧರಣಿ ನಡೆಸಿದ್ದಾರೆ.
ಜೆಡಿಯುದ ಎಲ್ಲ ಶಾಸಕರು, ಕಾರ್ಯಕರ್ತರು, ಸಂಸದರು ಕೂಡ 12 ತಾಸುಗಳ ಉಪವಾಸ ಇದ್ದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ನಿತೀಶ್ಕುಮಾರ್, ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಅಪ್ಪಟ ರೈತ ವಿರೋಧಿಯಾಗಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಮಸೂದೆ ನೀತಿಯ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ ನಿತೀಶ್ಕುಮಾರ್, ಮೋದಿಯವರ ಮೇಕ್ ಇನ್ ಇಂಡಿಯಾ ಆಂದೋಲನದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು.
ಮೇಕ್ ಇನ್ ಇಂಡಿಯಾ ಈ ದೇಶದ ಹಳ್ಳಿಗಳಲ್ಲಾಗಬೇಕು, ಬಿಹಾರದಲ್ಲಾಗಬೇಕು, ದೇಶದ ಯಾವುದೋ ಒಂದು ಕಡೆ ಆಗುವುದಲ್ಲ ಎಂದ ಅವರು, ಕೇಂದ್ರದ ನೀತಿ ರೈತರು ಮತ್ತು ಬಡವರ ವಿರೋದಿಯಾಗಿದೆ ಎಂದರು.