ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ಬೆಂಗಳೂರಿನಲ್ಲಿ ಏಪ್ರಿಲ್ ನಲ್ಲಿ ನಡೆಯುವುದು ನಿಗದಿಯಾಗುತ್ತಿದ್ದಂತೆಯೇ, ಕಾರ್ಯಕಾರಿಣಿಯನ್ನು ಪುನಾರಚಿಸಲಾಗಿದೆ.
178 ಮಂದಿಯ ಹೊಸ ಕಾರ್ಯಕಾರಿಣಿ ತಂಡವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಪ್ರಕಟಿಸಿದ್ದಾರೆ.
ಅಚ್ಚರಿಯೆಂಬಂತೆ ಪಟ್ಟಿಯಿಂದ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ನಜ್ಮಾ ಹೆಫ್ತುಲ್ಲಾ, ನಟಿ ಹೇಮಾ ಮಾಲಿನಿ, ಪಕ್ಷದ ವಕ್ತಾರೆ ಎನ್.ಸಿ. ಶೈನಾ ಸೇರಿದಂತೆ 70 ಮಂದಿಯನ್ನು ಕೈಬಿಡಲಾಗಿದೆ. ಇವರ ಬದಲಿಗೆ ಅನೇಕ ಹೊಸ ಮುಖಗಳಿಗೆ ಮಣೆ ಹಾಕಲಾಗಿದ್ದು, ಅವರಲ್ಲಿ ಇತ್ತೀಚೆಗಷ್ಟೇ ಶಿವಸೇನೆ ತೊರೆದು ಬಿಜೆಪಿ ಸೇರಿದ ಕೇಂದ್ರ ಸಚಿವ ಸುರೇಶ್ ಪ್ರಭು ಪ್ರಮುಖರು.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ, ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತಕುಮಾರ್ ಮತ್ತು ವೆಂಕಯ್ಯ ನಾಯ್ಡು ಅವರನ್ನು ಮುಂದುವರಿಸಲಾಗಿದೆ.
ಕಾರ್ಯಕಾರಿಣಿ ಸಮಿತಿಯಲ್ಲಿ 178 ಮಂದಿ ಇದ್ದು, ಇವರಲ್ಲಿ 111 ಮಂದಿ ಸದಸ್ಯರಾಗಿದ್ದಾರೆ. 27 ಮಂದಿಯನ್ನು ಕಾಯಂ ಆಹ್ವಾನಿತರನ್ನಾಗಿ ಮಾಡಲಾಗಿದೆ. 40 ಮಂದಿಯನ್ನು ವಿಶೇಷ ಆಹ್ವಾನಿತರನ್ನಾಗಿ ಮಾಡಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷರು, ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಶಾಸಕಾಂಗ ಪಕ್ಷದ ನಾಯಕರು, ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ.