ಬೆಂಗಳೂರು : ಮಾ.12ರ ಗುರುವಾರದಿಂದ 27ರವರೆಗೆ ರಾಜ್ಯಾದ್ಯಂತ 1017 ಕೇಂದ್ರಗಳಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ 6,10,939 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಗುರುವಾರ ಮೊದಲ ದಿನ ವಿಜ್ಞಾನ (ರಸಾಯನಶಾಸ್ತ್ರ) ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 12.15ರವರೆಗೆ ನಡೆಯಲಿದೆ.
ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತೀ ಪರೀಕ್ಷಾ ಕೇಂದ್ರಗಳ 200 ಮೀ. ಸುತ್ತಳತೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸುಷಮಾ ಗೋಡಬೋಲೆ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಿಂದ ಸಿ.ಬಿ.ಎಸ್.ಇ ನಿಯಮಾವಳಿಗಳನ್ನು ಅಳವಡಿಸಿ ಕೊಂಡಿರುವುದರಿಂದ ಹಾಜರಾತಿ ಕಡಿಮೆ ಇರುವ ಕಾರಣದಿಂದಾಗಿ 2000 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿಯಮಾನುಸಾರ ಅವಕಾಶ ನೀಡಲಾಗಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಹಾಲ್ ಟಿಕೆಟ್ ನಲ್ಲಿನ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಲು ಹಾಗೂ ಶುಲ್ಕ ಪಾವತಿ ಮಾಡದ ಕಾರಣಕ್ಕೆ ಯಾವುದೇ ವಿದ್ಯಾರ್ಥಿಗೆ ಹಾಲ್ ಟಿಕೆಟ್ ನಿರಾಕರಿಸದಿರಲು ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ ಎಂದರು.
ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳಿಗೆ ಸಿಸಿಟೀವಿ ಕ್ಯಾಮರಾ ಹಾಗೂ ಸಿಸಿಟೀವಿ ರೀತಿಯಲ್ಲೇ ಟ್ಯಾಬ್ಲೆಟ್ ಅಳವಡಿಕೆ ಮಾಡುವುದಾಗಿ ಕೆಲ ದಿನಗಳಿಂದ ಹೇಳುತ್ತಾ ಬಂದಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ಮಾತು ಹುಸಿಯಾಗಿದೆ. ಆದರೆ, ಸುಮಾರು 73 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಆಯ್ದ ಕೇಂದ್ರಗಳಿಗೆ ಮಾತ್ರ ಸಿಸಿಟೀವಿ ಅಥವಾ ಟ್ಯಾಬ್ಲೆಟ್ ಅಳವಡಿಸುವ ಪ್ರಸ್ತಾವನೆ ಇನ್ನೂ ಚರ್ಚೆಯಲ್ಲಿದೆ. ಸರ್ಕಾರದಿಂದ ಆದೇಶ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ, ಟ್ಯಾಬ್ಲೆಟ್ ಅಳವಡಿಸಿಲ್ಲ.
ಯಾವುದೇ ವದಂತಿಗಳಿಗೆ ಪರೀಕ್ಷಾರ್ಥಿಗಳು ಹಾಗೂ ಪೋಷಕರು ಕಿವಿಗೊಡಬಾರದು.ವದಂತಿ, ಮತ್ಯಾವುದೇ ಗೊಂದಲ ಉಂಟಾದರೆ ಕೂಡಲೇ ಇಲಾಖೆಯ ನಿರ್ದೇಶಕರ ಮೊಬೈಲ್ ಸಂಖ್ಯೆ 9480814001 ಅಥವಾ ಜಂಟಿ ನಿರ್ದೇಶಕರು(ಪರೀಕ್ಷೆ) 9480814006ಗೆ ಕರೆ ಮಾಡಬಹುದು.